ಗುಬ್ಬಿ :
ಗುಬ್ಬಿ ತಾಲೂಕಿನ ಸಿ.ಎಸ್ ಪುರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಎಂ.ಟಿ ಕೃಷ್ಣಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದುರ್ಗಮ್ಮ, ಸದಸ್ಯರಾದ ಈಶ್ವರಗೌಡ, ವಿಶಾಲಕ್ಷ್ಮಮ್ಮ, ಸಾವಿತ್ರಮ್ಮ, ರಘು, ಸ್ಥಳೀಯ ಮುಖಂಡರಾದ ನಂಜೇಗೌಡ, ನವೀನ್ ಕುಮಾರ್ ಸೇರಿ ಹಲವರು ಊಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಶಾಸಕ ಎಂ.ಟಿ ಕೃಷ್ಣಪ್ಪ ರಾಜ್ಯದ ಜನರಿಗೆ ತೆರಿಗೆ ಮೂಲಕ ಬರೆ ನೀಡಿದ ಮುಖ್ಯಮಂತ್ರಿಗಳು ತಲಾ ವ್ಯಕ್ತಿಗೆ 25 ಕೋಟಿ ರೂಗಳ ಟ್ಯಾಕ್ಸ್ ಹಾಕಿದ್ದಾರೆ. ಅಭಿವೃದ್ದಿ ಕಾಣದ ಈ ಸರ್ಕಾರ ನಡೆಸುವವರು ಸಿದ್ದರಾಮಯ್ಯ ಅಲ್ಲ ಟ್ಯಾಕ್ಸ್ ರಾಮಯ್ಯ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಹಾಲು, ಬಸ್ ಚಾರ್ಜ್, ಮೆಟ್ರೋ ಜಾರ್ಜ್ ಜೊತೆಗೆ ಮೂರು ಬಾರಿ ಮದ್ಯ ಮಾರಾಟದ ಮೇಲೆ ತೆರಿಗೆ, ಆಸ್ತಿ ತೆರಿಗೆ ಹೆಚ್ಚಿಸಿದ್ದಾರೆ. ಇದರಿಂದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಶಾಸಕರು ಕಿಡಿಕಾರಿದರು. ಹೆಣ್ಣು ಮಕ್ಕಳಿಗೆ ಭಾಗ್ಯದ ಹೆಸರಿನಲ್ಲಿ ನೀಡುವ ಎಲ್ಲಾ ಹಣವೂ ಪುರುಷರ ದುಡಿಮೆಯ ಹಣವಾಗಿದೆ. ತೆರಿಗೆ ಮೂಲಕ ನಮ್ಮ ದುಡ್ಡು ನಮಗೆ ನೀಡುವ ಕಲೆ ಕಾಂಗ್ರೆಸಿಗರಿಗೆ ಕರಗತವಾಗಿದೆ. ದುಡಿಯುವ ಗಂಡಸಿನ ಹಣವನ್ನು ಮನೆಯಲ್ಲಿನ ಹೆಣ್ಣು ಮಕ್ಕಳಿಗೆ ನೀಡುವ ಈ ಸರ್ಕಾರ ಭ್ರಷ್ಟ ಸರ್ಕಾರ ಎಂದೆನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ದೇವರಾಜ್ ಅರಸು ಅವರ ಕಾಲದಿಂದ ನಾನು ನೋಡಿದ ಸರ್ಕಾರಗಳ ಪೈಕಿ ಈಗಿನ ಕಾಂಗ್ರೆಸ್ ಸರ್ಕಾರ ಕೆಟ್ಟ ಸರ್ಕಾರ ಎಂದು ಹೇಳಬಹುದಾಗಿದೆ. ಅಭಿವೃದ್ದಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಎರಡು ವರ್ಷ ಪೂರೈಸುತ್ತಿದ್ದಾರೆ. ಇಂದಿಗೂ ರಸ್ತೆ ಗುಂಡಿ ಮುಚ್ಚಲು ಬಿಡಿಗಾಸು ನೀಡಿಲ್ಲ ಎಂದು ಕುಟುಕಿದರು.