ಗುಬ್ಬಿ : ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ಮತ್ತೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಗುಬ್ಬಿ ತಾಲೂಕಿನ ಸಂಕಾಪುರ ಬಳಿ ಕೆನಾಲ್ ಕಾಮಗಾರಿ ಆರಂಭಿಸಿರೋದನ್ನು ವಿರೋಧಿಸಿ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಇದೇ ತಿಂಗಳು 31ನೇ ತಾರೀಖಿನಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಇದೀಗ ಈ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಗುಬ್ಬಿ ತಾಲೂಕು ಆಡಳಿತ ಭರ್ಜರಿ ಪ್ಲಾನ್ ಮಾಡಿದ್ದು, ಗುಬ್ಬಿ ತಾಲೂಕಿನ ಸಂಕಾಪುರ ಗೇಟ್ ಸುತ್ತ ಹತ್ತು ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಗುಬ್ಬಿ ತಹಶೀಲ್ದಾರ್ ಆದೇಶವನ್ನು ಹೊರಡಿಸಿದ್ದಾರೆ.
31ನೇ ತಾರೀಖಿನಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗುಬ್ಬಿ ತಹಶೀಲ್ದಾರ್ ಈ ನಿರ್ಧಾರ ಕೈಗೊಂಡಿದ್ದಾರೆ. ಮೇ 31ನೇ ತಾರೀಖು ಬೆಳಿಗ್ಗೆ 6 ಗಂಟೆಯಿಂದ ಜೂನ್ 1ನೇ ತಾರೀಖು ಬೆಳಿಗ್ಗೆ 6 ಗಂಟೆಯವರೆಗೆ ಬರೋಬ್ಬರಿ 24 ಗಂಟೆಗಳ ಕಾಲ ಸಂಕಾಪುರ/ ಡಿ.ರಾಂಪುರ ಸುತ್ತ 10 ಕಿ.ಮೀ ಸುತ್ತಳತೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ನಿಷೇಧಾಜ್ಞೆ ಹಿನ್ನೆಲೆ ಈ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಜನಸಾಮಾನ್ಯರನ್ನು ಕೆರಳಿಸುವಂತೆ ಭಾಷಣ ಮಾಡುವಂತಿಲ್ಲ. ಯಾವುದೇ ಸಭೆ, ಸಮಾರಂಭ ಮತ್ತು ಮೆರವಣಿಗೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಇದು ಹೇಮೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರೋ ನೀರನ್ನು ರಾಮನಗರ ಜಿಲ್ಲೆಗೆ ಕೊಂಡೊಯ್ಯಲು ಹುನ್ನಾರ ನಡೆಯುತ್ತಿದೆ. ಎಂದು ಆರೋಪಿಸಿ ಹೋರಾಟಗಾರರು ನಮ್ಮ ನೀರು ನಮ್ಮ ಹಕ್ಕು ಅನ್ನೋ ಘೋಷಣೆಯೊಂದಿಗೆ ಹೇಮೆ ಹೋರಾಟವನ್ನು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಮೇ.31 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೀಗ ಗುಬ್ಬಿ ತಾಲೂಕು ಆಡಳಿತ ನಿಷೇಧಾಜ್ಞೆ ಹೇರುವ ಮೂಲಕ ಈ ಪ್ರತಿಭಟನೆಗೆ ಅವಕಾಶ ನೀಡದಿರಲು ನಿರ್ಧರಿಸಿದೆ.