ಯುಗಾದಿ ಹೊಸ್ತಿಲಲ್ಲೇ ಒಬ್ಬಟ್ಟು ಪ್ರಿಯರಿಗೆ ಆರೋಗ್ಯ ಇಲಾಖೆಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ, ಹೌದು ಇಡ್ಲಿ, ಬಟಾಣಿ, ಕಲ್ಲಂಗಡಿ ಬಳಿಕ ಒಬ್ಬಟ್ಟಿಗೆ ಬಳಸುವ ಬೆಲ್ಲದಲ್ಲೂ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ.
ಇನ್ನು ಇದರ ಜೊತೆಗೆ ಟೊಮ್ಯಾಟೋ ಸಾಸ್ ನಲ್ಲೂ ರಾಸಾಯನಿಕ ಅಂಶ ಪತ್ತೆಯಾಗಿದೆ, ಒಟ್ಟು 600 ಕ್ಕೂ ಹೆಚ್ಚು ಸ್ಯಾಂಪಲ್ಸ್ ಗಳನ್ನು ಆರೋಗ್ಯ ಇಲಾಖೆ ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು, ಅದರಲ್ಲಿ 200 ಸ್ಯಾಂಪಲ್ಸ್ ಗಳ ವರದಿ ಪ್ರಕಾರ ರಾಸಾಯನಿಕ ಬೆರಕೆ ಮಾಡಿರುವುದು ಖಚಿತಪಡಿಸಿದೆ. ಇದರೊಂದಿಗೆ ಇಡ್ಲಿ ತಯಾರಿಸಲು ಬಳಸುವ ಪ್ಲ್ಯಾಸ್ಟಿಕ್ ನಿಂದಲೂ ಕ್ಯಾನ್ಸರ್ ಹಾಗೂ ಇನ್ನಿತರ ಕಾಯಿಲೆಗಳು ಬರುತ್ತವೆ ಎಂದು ಹೇಳಲಾಗಿತ್ತು. ಕಲ್ಲಂಗಡಿ ಹಣ್ಣಿನಲ್ಲಿ ಸಹ ಆಕರ್ಷಕವಾಗಿ ಕಾಣಲು ಕಲರ್ ಇಂಜೆಕ್ಟ್ ಮಾಡಲಾಗುತ್ತಿದೆ ಎನ್ನುವ ಅಂಶ ಬಯಲಾಗಿತ್ತು. ಇದೀಗ ಬೆಲ್ಲದಲ್ಲಿ ಗೊಲ್ಡನ್ ಬಣ್ಣ ಬರಲು ರಾಸಾಯನಿಕ ಬಳಕೆ ಮಾಡ್ತಿರುವುದು ಖಚಿತವಾಗಿದೆ. ಮತ್ತೇ ಟೊಮ್ಯಾಟೋ ಸಾಸ್ ನಲ್ಲೂ ಕೂಡ ಕೆಂಪು ಬಣ್ಣ ಬರಲು ಕೃತಕ ಬಣ್ಣ ಬಳಸುತ್ತಿರುವುದು ಖಚಿತವಾಗಿದೆ.
ಬೆಲ್ಲದಲ್ಲಿ ಸಲ್ಫರ್ ಡೈ ಆಕ್ಸೈಡ್ ಬಳಸುತ್ತಿರುವುದರಿಂದ ಮನುಷ್ಯನ ಮೂಳೆ ಎಲುಬು ಮತ್ತು ನರಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ ಎಂದಿದ್ದಾರೆ. ಟೊಮ್ಯಾಟೊ ಕೆಚಪ್ ನಲ್ಲಿ ಸೋಡಿಯಂ ಬೆಂಜೊಯೆಟ್ ಎಂಬ ರಾಸಾಯನಿಕ ಮಿಕ್ಸ್ ಮಾಡಲಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಅತ್ಯಂತ ಗಂಭೀರವಾದ ಪರಿಣಾಮ ಬೀರಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಇನ್ಮುಂದೆ ಪ್ರತಿ ತಿಂಗಳು ಒಂದೊಂದು ಆಹಾರ ಪದಾರ್ಥವನ್ನು ಪರೀಕ್ಷೆ ಮಾಡಿ ಆ ವರದಿಯನ್ನು ಸಾರ್ವಜನಿಕರಿಗೆ ತಿಳಿಸುತ್ತೇವೆ ಎಂದಿದ್ದಾರೆ.