ಸುಮಾರು 5 ಸಾವಿರ ಇತಿಹಾಸವುಳ್ಳ ಕರುನಾಡಿನ ಸುಪ್ರಸಿದ್ದ ಕಮನೀಯ ಕ್ಷೇತ್ರವಾದ ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಇಂದು ಜರುಗಿತು. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಗೃಹ ಸಚಿವ ಪರಮೇಶ್ವರ್ ಚಾಲನೆ ನೀಡಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದು ಬಂದಿತ್ತು. ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಹಾಗೂ ದೇವರ ಮೂರ್ತಿಗೆ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಅಲ್ದೇ ಬರುವ ಭಕ್ತರಿಗೆ ಪ್ರಸಾದ ವಿನಿಯೋಗವನ್ನು ಕೂಡ ಏರ್ಪಡಿಸಲಾಗಿತ್ತು.
ಕಮನೀಯ ಕ್ಷೇತ್ರವಾದ ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ನಂತರ ಆಕಾಶದಲ್ಲಿ ಗರುಡದೇವರ ಆಗಮನವಾಗುತ್ತೆ. ಗರುಡ ದೇವ ರಥೋತ್ಸವದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ರಥ ಎಳೆಯುವುದು ಇಲ್ಲಿನ ವಾಡಿಕೆಯಾಗಿದೆ. ಅದ್ರಂತೆ ಈ ಬಾರಿಯೂ ರಥೋತ್ಸವದ ಸುತ್ತ ಗರುಡದೇವ ಪ್ರದಕ್ಷಿಣೆ ಹಾಕಿದ ಬಳಿಕ ಪರಮೇಶ್ವರ್ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರಲ್ಲಿ ಹರ್ಷೋದ್ಘಾರ. ಜಯ ಘೋಷ ಮೊಳಗಿತು. ಭಕ್ತರು ಬಾಳೆಹಣ್ಣು, ದವನ ಎಸೆದು ನಮಿಸಿದ್ರು. ಇನ್ನು ಈ ಕ್ಯಾಮೇನಹಳ್ಳಿ ರಥೋತ್ಸವ ಅಂದ್ರೆ ಪ್ರಸಿದ್ಧಿ ಪಡೆದಿದ್ದು, ಅಕ್ಕ-ಪಕ್ಕದ ಹಳ್ಳಿಗಳ ಜನರಲ್ಲದೇ, ರಾಜ್ಯ- ಹೊರ ರಾಜ್ಯದಿಂದಲೂ ಭಕ್ತರ ದಂಡೇ ಹರಿದು ಬಂದಿದೆ.
ಇನ್ನು ಕ್ಯಾಮೇನಹಳ್ಳಿ ಆಂಜನೇಯ ರಥೋತ್ಸವದ ಅಂಗವಾಗಿ ದನಗಳ ಜಾತ್ರೆಯನ್ನು ನಡೆಸಲಾಗಿದ್ದು, ನಾನಾ ಬಗೆಹ ಹಳ್ಳಿಕಾರ್ ರಾಸುಗಳು ಜಾತ್ರೆಯಲ್ಲಿ ಕಾಣಿಸಿದ್ವು.. ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ 24 ಉತ್ತಮ ರಾಸುಗಳಿಗೆ ಕೊರಟಗೆರೆ ತಾಲೂಕು ಆಡಳಿತದಿಂದ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ವಿತರಿಸಿದ್ರು. ಶ್ರೀಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ರಾಮಚಾರ್ ಮಾತನಾಡಿ ಸೂರ್ಯದೇವ ತನ್ನ ಪಥವನ್ನ ಬದಲಿಸುವ ದಿನ ದೇವರ ದರ್ಶನ ಪಡೆದರೇ ಇಷ್ಠಾರ್ಥ ಸಿದ್ದಿ ಆಗಲಿದೆ ಎಂದರು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದು ದೇವರ ಕೃಪೆಗೆ ಪಾತ್ರರಾಗಿದ್ದಾತರೆ ಎಂದ್ರು.
ಇನ್ನು ಆಂಜನೇಯಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಮದುವೆಯಾಗಿ ಗಂಡನ ಮನೆಗೆ ಹೋಗಿರೋ ಹೆಣ್ಣು ಮಕ್ಕಳು ತವರು ಮನೆಗೆ ಆಗಮಿಸಲಿದ್ದು, ಹೆಣ್ಣು ಮಕ್ಕಳಿಗೆ ಬಳೆ ತೊಡಿಸುವುದು ರಥೋತ್ಸವದ ಒಂದು ಭಾಗವಾಗಿದೆ. ಇದಕ್ಕಾಗಿ ಗ್ರಾಮದ ಹೆಣ್ಣುಮಕ್ಕಳು ಈ ಜಾತ್ರೆಗಾಗಿ ಕಾತುರದಿಂದ ಕಾಯ್ತಾ ಇದ್ದಾರೆ.
ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿ, 19ವರ್ಷದಿಂದ ಶ್ರೀಆಂಜನೇಯ ಸ್ವಾಮಿಯ ದೇವಾಲಯ ಮತ್ತು ರಥೋತ್ಸವಕ್ಕೆ ವಿಶೇಷ ಹೂವಿನ ಅಲಂಕಾರ ಮಾಡುತ್ತಿದ್ದೇನೆ.ಇದರ ಜೊತೆ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿದ್ದೇನೆ. ದೇವರ ಶಕ್ತಿ ಇರುವ ತನಕ ಸ್ವಾಮಿಯ ಸೇವೆ ಸಲ್ಲಿಸುತ್ತೇನೆ ಎಂದರು. ಒಟ್ನಲ್ಲಿ ಇತಿಹಾಸ ಪ್ರಸಿದ್ಧವಾಗಿರೋ ಕ್ಯಾಮೇನಹಳ್ಳಿ ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಆ ದೇವರು ಈಡೇರುತ್ತಾನೆ ಎಂಬುದು ಅಲ್ಲಿನ ಜನರ ಅಪಾರ ನಂಬಿಕೆ.