ರಾಜ್ಯ : ಭಾರಿ ಮಳೆಯಿಂದ ಕರ್ನಾಟಕದ ಈ ಎರಡು ಕಡೆ ಅರಣ್ಯ ಸಫಾರಿ ಬಂದ್

ರಾಜ್ಯ : ರಾಜ್ಯ ಪ್ರವೇಶಿಸಿರುವ ಮುಂಗಾರು ಮಳೆ ಈಗಲೇ ತನ್ನ ಪ್ರಭಾವ ತೋರಿಸುತ್ತಿದ್ದು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದೆ. ಈ ಮಳೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಅಪಾಯದ ಪರಿಸ್ಥಿತಿ ಉಂಟುಮಾಡಿದೆ.

ಇನ್ನು ನಾಣಚ್ಚಿ ಗೇಟ್ (ಕೊಡಗು) ಮತ್ತು ವೀರನಹೊಸಹಳ್ಳಿ (ಮೈಸೂರು) ಸಫಾರಿಗಳನ್ನು ಭಾರೀ ಮಳೆಯಿಂದಾಗಿ ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಘೋಷಿಸಿದೆ. ಆದರೆ, ದಮ್ಮನಕಟ್ಟೆ (ಕಬಿನಿ) ಕೇಂದ್ರದಲ್ಲಿ ಸಫಾರಿ ಎಂದಿನಂತೆ ನಡೆಯುತ್ತದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ, ಭಾರಿ ಗಾಳಿ ಮತ್ತು ಮಳೆಯ ಸಾಧ್ಯತೆ ಇದೆ. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮುರ್ಡೇಶ್ವರ ಮತ್ತು ಕಾರವಾರ ಕಡಲತೀರಗಳಲ್ಲಿ ಕೆಂಪು ಬಾವುಟ ನೆಡಲಾಗಿದೆ ಮತ್ತು ಪ್ರವಾಸಿಗರಿಗೆ ತಾತ್ಕಾಲಿಕ ಪ್ರವೇಶ ನಿರ್ಬಂಧಿಸಲಾಗಿದೆ.

ಕೊಡಗು ಜಿಲ್ಲೆಯಾದ್ಯಂತ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಲಪಾತಗಳು ಮೈದುಂಬಿ ಧುಮ್ಮುಕ್ಕುತ್ತಿವೆ. ಈ ಹಿನ್ನೆಲೆ ಕೊಡಗು ಜಿಲ್ಲಾಧಿಕಾರಿ ಕೆ. ವೆಂಕಟರಾಜ ಅವರು ನದಿ, ತೊರೆ ಮತ್ತು ಜಲಪಾತಗಳ ತಳಭಾಗಕ್ಕೆ ಇಳಿಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಆದೇಶ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

 

Author:

...
Keerthana J

Copy Editor

prajashakthi tv

share
No Reviews