ಕೊಡಗು:
ನೈರುತ್ಯ ಮುಂಗಾರು ಮಳೆಯಿಂದ ಕೊಡಗು ಜಿಲ್ಲೆಯಲ್ಲಿ 2018-19ರಲ್ಲಿ ಪ್ರಾಕೃತಿಕ ವಿಕೋಪದಿಂದ ಗುಡ್ಡ ಕುಸಿತವಾಗಿ ನೂರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಈ ದುರಂತದಲ್ಲಿ ಮನೆ ಕಳೆದುಕೊಂಡ 252 ಸಂತ್ರಸ್ತ ಕುಟುಂಬಗಳಿಗೆ ಈಗ ನೆಮ್ಮದಿಯ ಸೂರು ಸಿಕ್ಕಿದೆ.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಇನ್ಫೋಸಿಸ್ ಸಂಸ್ಥೆಯ ಸುನಿಲ್ ಕುಮಾರ್, ಸಂತೋಷ್ ಹಾಗೂ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಉಪಸ್ಥಿತಿಯಲ್ಲಿ ಸಂತ್ರಸ್ತರಿಗೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಟರಿ ಮೂಲಕ ಮನೆಗಳನ್ನು ಹಂಚಿಕೆ ಮಾಡಲಾಗಿದೆ.
ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆ ಕಳೆದುಕೊಂಡ ಸಂತ್ರಸ್ತರು ಮೊದಲ ಆದ್ಯತೆಯಲ್ಲಿ ಗಾಳಿಬೀಡು, 2ನೇ ಆದ್ಯತೆಯಲ್ಲಿ ಜಂಬೂರು ಆಯ್ಕೆ ಮಾಡಿದ್ದರು. ಇನ್ಫೋಸಿಸ್ ಸಂಸ್ಥೆಯ 200 ಮನೆಗಳು ಜೊತೆಗೆ ವಿವಿಧ ಪ್ರದೇಶದ 52 ಮನೆಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಈ ಹಿಂದೆ ಬಿಳಿಗೇರಿಯಲ್ಲಿ 22, ಕರ್ಣಂಗೇರಿಯಲ್ಲಿ 35, ಮದೆನಾಡು ಬಳಿ 76, ಕೆ. ನಿಡುಗಣೆ ಬಳಿ 74, ಜಂಬೂರಿನಲ್ಲಿ 379 ಮನೆಗಳು ಸೇರಿದಂತೆ ಒಟ್ಟು 586 ಮನೆಗಳು ಹಂಚಿಕೆಯಾಗಿತ್ತು. ಇದುವರೆಗೂ ಒಟ್ಟು 838 ಮನೆಗಳನ್ನು ಹಂಚಿಕೆ ಮಾಡಲಾಗಿದೆ.
ಈಗಾಗಲೇ ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗಿದ್ದು, ಮನೆ ಹಕ್ಕುಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಂದ ಶೀಘ್ರವೇ ವಿತರಿಸಲಾಗುವುದು" ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.