TUMAKURU NEWS : ತುಮಕೂರು ಗ್ರಾಮಾಂತರ ಕ್ಷೇತ್ರದ ಗೂಳೂರು ಹೋಬಳಿಯ ಮಸ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವರ ಕೆರೆ ಎಂದು ಹೆಸರುವಾಸಿಯಾಗಿರೋ ಕೆರೆಯತ್ತ ಅಧಿಕಾರಿಗಳಾಗಲಿ ಅಥವಾ ಶಾಸಕರಾಗಲಿ ತಿರುಗಿ ನೋಡ್ತಾ ಇಲ್ಲ. ದೇವರ ಕೆರೆ ಅಂತಾ ಪ್ರಸಿದ್ಧಿಯಾಗಿದ್ರು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಸುಮಾರು 988 ಹೆಕ್ಟೆರ್ ವಿಸ್ತೀರ್ಣವುಳ್ಳ ಈ ಕೆರೆ ಪುರಾತನ ಇತಿಹಾಸ ಇದೆ. ಈ ಕೆರೆಗೆ ತುಮಕೂರು ಜಿಲ್ಲೆಯ ನಾನಾ ಭಾಗಗಳಿಂದಲೂ ದೇವರುಗಳನ್ನು ಕರೆತಂದು ಈ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿಸಿ ಕರೆದೊಯ್ಯಲಾಗುತ್ತೆ. ಈ ಕೆರೆಗೆ ಪ್ರತಿ ವರ್ಷವೂ ನಾನಾ ದೇವರುಗಳು ಆಗಮಿಸಿ ಪುಣ್ಯ ಸ್ನಾನ ಮಾಡಿಸಿ, ತಮ್ಮ ಊರುಗಳಿಗೆ ಕೊಂಡೊಯ್ಯುವ ಕೆಲಸ ಆಗುತ್ತೆ. ಆದ್ರೆ ಈ ಕೆರೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.
ಈ ಕೆರೆಯ ಬಳಿ ಪೂಜೆಗೆಂದು ಬಂದಾಗ ಮಳೆ ಬಂದ್ರೆ ನಿಲ್ಲಲು ಸರಿಯಾದ ಜಾಗವಿಲ್ಲ, ಹೀಗಾಗಿ ಮಳೆ ಬಂತೆಂದ್ರೆ ಭಕ್ತರು ಮಳೆಯಲ್ಲಿ ನೆಂದು ಪೂಜೆ ಮಾಡಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಅಷ್ಟೇ ಯಾಕೆ ಪುಣ್ಯಸ್ನಾನಕ್ಕೆ ಬಂದ ದೇವರು ಕೂಡ ಮಳೆಯಲ್ಲೇ ನೆನೆಯುವ ಸ್ಥಿತಿ ಇದೆ. ಅಲ್ದೇ ನಿತ್ಯ ಈ ಕೆರೆಯ ಬಳಿ ನೂರಾರು ಮಂದಿ ಭಕ್ತರು ಆಗಮಿಸ್ತಾ ಇದ್ದು, ಭಕ್ತರಿಗೆ ಶೌಚಾಲಯದ ವ್ಯವಸ್ಥೆ ಕೂಡ ಇಲ್ಲವಾಗಿದೆ. ಇದ್ರಿಂದ ಭಕ್ತರು ಪರದಾಡುವಂತ ಸ್ಥಿತಿ ನಿರ್ಮಾಣ ಆಗಿದೆ.
ಇನ್ನು ಈ ಕೆರೆ ಏರಿಯ ಮೇಲೆ ಗಿಡಗೆಂಟೆಗಳು ಬೆಳೆದು ನಿಂತಿದ್ದು, ಚಿರತೆಗಳ ವಾಸಸ್ಥಾನವಾಗಿ ಮಾರ್ಪಟ್ಟ ಆಗಿದ್ದು, ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಸುತ್ತಮುತ್ತಲ ಗ್ರಾಮಗಳ ಜನರೇ ಕೆರೆ ಏರಿಯಲ್ಲಿ ಬೆಳೆದು ನಿಂತಿರೋ ಗಿಡಗಳನ್ನು ಕಿತ್ತು ಹಾಕಿದ್ರು ಕೂಡ ಬೆಳೆಯುತ್ತಲೇ ಇದ್ದು, ಕೆರೆಯ ಏರಿ ಒಡೆಯುವ ಅಪಾಯ ಹೆಚ್ಚಾಗಿದೆ. ದೇವರ ಕೆರೆ ಬಳಿ ಇಷ್ಟೆಲ್ಲ ಅಪಾಯ ಇದ್ರು ಕೂಡ ಅಧಿಕಾರಿಗಳಾಗಲಿ, ಶಾಸಕರಾಗಲಿ ಇತ್ತ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು.
ದೇವರ ಕೆರೆ ಅಂತಾ ಹೆಸರುವಾಸಿಯಾಗಿರೋ ಕೆರೆಗೆ ಇಂತಹ ಸ್ಥಿತಿ ಬಂದಿರುವುದು ಮಾತ್ರ ವಿಪರ್ಯಾಸವೇ ಸರಿ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ಕೆರೆ ಅಭಿವೃದ್ಧಿಗೆ ಗಮನಹರಿಸಬೇಕಿದೆ.