ರಾಜ್ಯ : ದೇಶಾದ್ಯಂತ ಮತ್ತೆ ಕೊರೊನಾ ಸೋಂಕು ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದ್ದು, ಜನರಲ್ಲಿ ಆತಂಕದ ಸನ್ನಿವೇಶ ಮನೆಮಾಡಿದೆ. ಕಳೆದ ಮೂರುನಾಲ್ಕು ವರ್ಷಗಳ ಹಿಂದೆ ನಮ್ಮನ್ನು ತಲ್ಲಣಗೊಳಿಸಿದ್ದ ಕೊರೊನಾ ಮಹಾಮಾರಿ ಮತ್ತೆ ತಲೆದೋರುತ್ತಾ ಎಂಬ ಭಯ ಆವರಿಸುತ್ತಿದೆ. ಈ ನಡುವೆ, ಕರ್ನಾಟಕದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ತುರ್ತು ಸಭೆಗಳನ್ನೂ ನಡೆಸುತ್ತಿದೆ.
ಈ ಪರಿಪ್ರೇಕ್ಷಣೆಯಲ್ಲಿ ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಶ್ರೀ ಮಧು ಬಂಗಾರಪ್ಪ ಅವರು ರಾಜ್ಯದ ಜನತೆಗೆ ಮಹತ್ವದ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಸಚಿವರ ಹಿತವಚನ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯಪೂರ್ಣವಾಗಿದ್ದು, ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಬಹುದು ಎಂಬ ನಂಬಿಕೆ ವ್ಯಕ್ತವಾಗಿದೆ.
ಕೊರೊನಾ ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲಿ ಹೆಚ್ಚಾಗುತ್ತಿದೆ. ಈ ಬಗ್ಗೆ ಯಾರೂ ಗಾಬರಿ ಪಡಬೇಕಾಗಿಲ್ಲ, ಆದರೆ ಜವಾಬ್ದಾರಿ ಮರೆಯಬಾರದು. ಎಚ್ಚರಿಕೆಯಿಂದಿರುವುದು ಎಲ್ಲರ ಜವಾಬ್ದಾರಿ. ಏಕೆಂದರೆ ನಾವೆಲ್ಲ ಅದರ ಪರಿಣಾಮವನ್ನು ಎರಡು ವರ್ಷ ಅನುಭವಿಸಿದ್ದೇವೆ. ಮೂರ್ನಾಲ್ಕು ವರ್ಷಗಳ ಹಿಂದೆ ಬಂದ ಕೊರೊನಾ ಮಹಾಮಾರಿ ಏನೆಲ್ಲಾ ಅವಾಂತರ ಸೃಷ್ಟಿಸಿತ್ತು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಅನೇಕ ಸಾವು ನೋವುಗಳು ಸಂಭವಿಸಿದ್ದವು. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕುಟುಂಬಸ್ಥರನ್ನು ಕಳೆದುಕೊಂಡರು. ಜೊತೆಗೆ ಲಾಕ್ಡೌನ್ ಆಗಿ ಎಷ್ಟೇ ಆರ್ಥಿಕ ವ್ಯವಸ್ಥೆ ಕುಸಿದಿತ್ತು. ಹೀಗಾಗಿ ಈ ಬಾರೀ ಕೂಡ ಎಲ್ಲರೂ ಎಚ್ಚರಿಕೆಯಿಂದಿರಬೇಕಿರುವುದು ಮುಖ್ಯ ಹೇಳಿದ್ದಾರೆ.