BANGALORE NEWS : ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಭವಿಷ್ಯ ಈಗ ಪ್ರಶ್ನಾರ್ಥಕವಾಗಿದೆ. ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತದ ಹಿನ್ನಲೆಯಲ್ಲಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಮಾತನಾಡುತ್ತಾ, "ಕಾಲ್ತುಳಿತದಂತಹ ದುರ್ಘಟನೆಗಳು ಯಾವುದೇ ಸರ್ಕಾರದ ಅವಧಿಯಲ್ಲಿ ನಡೆಯಬಾರದು. ಈ ಘಟನೆ ವೈಯಕ್ತಿಕವಾಗಿ ನನಗೂ ನೋವು ತಂದಿದೆ. ದೀರ್ಘಕಾಲದ ಪರಿಹಾರವಾಗಿ ಸ್ಟೇಡಿಯಂ ಅನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತು ಪರಿಗಣನೆ ನಡೆಯುತ್ತಿದೆ," ಎಂದಿದ್ದಾರೆ.
ಇದೇ ವೇಳೆ, ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಚಿನ್ನಸ್ವಾಮಿ ಕ್ರೀಡಾಂಗಣವನ್ನು ವಶಪಡಿಸಿಕೊಳ್ಳುವಂತೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಉಮೇಶ್ ಅವರ ಪ್ರಕಾರ, ಸ್ಟೇಡಿಯಂ ನಗರದ ಮಧ್ಯ ಭಾಗದಲ್ಲಿ ಇರುವುದು ಹಲವಾರು ತೊಂದರೆಗಳಿಗೆ ಕಾರಣವಾಗಿದೆ. ಟ್ರಾಫಿಕ್, ಭದ್ರತಾ ಅಸೌಕರ್ಯ, ಪರಿಸರ ಹಾನಿ ಸೇರಿದಂತೆ ಹಲವು ವಿಚಾರಗಳನ್ನು ಅವರು ಉಲ್ಲೇಖಿಸಿದ್ದಾರೆ. ಸ್ಟೇಡಿಯಂ ಇರುವ ಜಾಗವು ಮೂಲತಃ ಸೇನೆಗೆ ಸೇರಿದದ್ದಾಗಿದ್ದು, KSCA ಲೀಸಿನ ಆಧಾರದಲ್ಲಿ ಬಳಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಏರ್ಪೋರ್ಟ್ ಸಮೀಪದಲ್ಲಿ KSCAಗೆ ಸೇರಿದ 100 ಎಕರೆ ಜಾಗವಿದೆ. ಅಲ್ಲಿಗೆ ಚಿನ್ನಸ್ವಾಮಿ ಹಾಗೂ ಕಂಠೀರವ ಸ್ಟೇಡಿಯಂಗಳನ್ನು ಸ್ಥಳಾಂತರಿಸುವಂತೆ ಉಮೇಶ್ ಅವರು ಒತ್ತಾಯಿಸಲು ಉದ್ದೇಶಿಸಿದ್ದಾರೆ. ಇದಕ್ಕೆ ಬೆಂಬಲವಾಗಿ, ಹಿಂದಿನ ಬಾಂಬ್ ಬ್ಲಾಸ್ಟ್ ಘಟನೆ, ಪರಿಸರ ಹಾನಿ ಹಾಗೂ ಇತ್ತೀಚಿನ ಕಾಲ್ತುಳಿತದ ಮರಣಗಳನ್ನೂ ಅವರು ಉಲ್ಲೇಖಿಸಿದ್ದಾರೆ.