TUMAKURU NEWS : ಆರ್ಸಿಬಿಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತದಲ್ಲಿ ಕುಣಿಗಲ್ನ ಮನೋಜ್ ದಾರುಣವಾಗಿ ಸಾವನ್ನಪ್ಪಿದ್ರು. ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ್ದ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಸರ್ಕಾರದ ಆದೇಶದಂತೆ ಇಂದು ತುಮಕೂರಿನಲ್ಲಿ ಮನೋಜ್ ತಂದೆ ದೇವರಾಜುಗೆ ಪರಿಹಾರದ ಹಣವನ್ನು ಹಸ್ತಾಂತರ ಮಾಡಲಾಯ್ತು. ಹೌದು ಇಂದು ಡಿಸಿ ಕಚೇರಿಯಲ್ಲಿ ಮನೋಜ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಹಣದ ಚೆಕ್ನನ್ನು ವಿತರಣೆ ಮಾಡಲಾಯ್ತು.
ಕುಣಿಗಲ್ನ ಯಡಿಯೂರು ಮೂಲದವನಾಗಿದ್ದ ಮನೋಜ್, ತಂದೆ, ತಾಯಿ ಹಾಗೂ ತಂಗಿ ಜೊತೆ ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ರು. ಕೆಂಪಾಪುರದ ರೆಸಿಡೆನ್ಸಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಮನೋಜ್, ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ರು. ಮನೋಜ್ ಅಂತ್ಯಕ್ರಿಯೆ ನಡೆದು ಮೂರು ದಿನಗಳ ಬಳಿಕ ಇಂದು ತುಮಕೂರು ನಗರದ ಡಿಸಿ ಕಚೇರಿಯಲ್ಲಿ ಪರಿಹಾರದ ಚೆಕ್ ಹಸ್ತಾಂತರಿಸಲಾಯ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್ ಪರಿಹಾರದ ಚೆಕ್ ಮೃತ ಮನೋಜ್ ಕುಟುಂಬಕ್ಕೆ ಹಸ್ತಾಂತರ ಮಾಡಬೇಕಿತ್ತು. ಆದ್ರೆ ಸಿಎಂ ನಿವಾಸದಲ್ಲಿ ತುರ್ತು ಸಭೆ ಇರುವುದಾಗಿ ಕರೆ ಬಂದಿದ್ದರಿಂದ ಪರಮೇಶ್ವರ್ ದಿಢೀರ್ ಬೆಂಗಳೂರಿಗೆ ತೆರಳಿದ್ರು. ಹೀಗಾಗಿ ಪರಮೇಶ್ವರ್ ಬದಲಿಗೆ ಡಿಸಿ ಶುಭಕಲ್ಯಾಣ್ ಮನೋಜ್ ಕುಟುಂಬಕ್ಕೆ ಪರಿಹಾರದ ಚೆಕ್ನನ್ನು ಹಸ್ತಾಂತರ ಮಾಡಿದ್ರು. ಈ ವೇಳೆ ಮನೋಜ್ ತಂದೆ ತನ್ನ ಮಗನನ್ನು ನೆನೆದು ಭಾವುಕರಾಗಿ ಕಣ್ಣೀರಾಕಿದ್ರು.
ಇನ್ನು ಈ ವೇಳೆ ಮಾತನಾಡಿದ ಮೃತ ಮನೋಜ್ ತಂದೆ ದೇವರಾಜು, ಸರ್ಕಾರ ಚೆಕ್ ಏನೋ ಕೊಟ್ಟಿದೆ ಸರ್ ಆದ್ರೆ ಮಗ ಬರೋದಿಲ್ಲ ಅಲ್ವಾ..? ಇದ್ದೋನು ಒಬ್ಬನೇ ಮಗ ಸಾರ್… ಅವನೇ ಇಲ್ಲ ಅಂದ್ರೆ ಈ ದುಡ್ಡು ತಗೊಂಡು ಏನು ಮಾಡಲಿ. ದುಡ್ಡುಕೊಟ್ಟರೇ ಯಾರು ಬದುಕಿ ಬರೋದಿಲ್ಲ, ಸರ್ಕಾರ ದುಡ್ಡು ಕೊಡೊದು ಬೇಡ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿತ್ತು. ನಮ್ಮ ಪರಿಸ್ಥಿತಿ ಹೇಗಿರುತ್ತೇ ಅಂತಾ ಯೋಚನೆ ಮಾಡಬೇಕು. ಇದ್ದವನು ಒಬ್ಬನೇ ಮಗ, ಇನ್ನೊಂದು ವರ್ಷಕ್ಕೆ ಓದು ಮುಗಿಯುತ್ತಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಕೆಲಸಕ್ಕೂ ಸೇರಿ, ಮನೆಗೆ ಬೆನ್ನುಲುಬಾಗಿದ್ದ. ಅವನು ದುಡಿದ ಹಣ ಕೊಡದಿದ್ದರೆ ಬೇಡ, ಅವನು ಜೊತೆಯಲ್ಲಿ ಇರಬೇಕಿತ್ತು. ಸರ್ಕಾರ ಕೊಟ್ಟ ಹಣ ಸಮಾಧಾನ ಮಾಡೋದಿಲ್ಲ ಅಂತಾ ಮನೋಜ್ ತಂದೆ ದೇವರಾಜು ಭಾವುಕರಾದ್ರು.
ಸರ್ಕಾರದ ಆದೇಶದಂತೆ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರದ ಚೆಕ್ನನ್ನು ವಿತರಣೆ ಮಾಡಲಾಗಿದೆ. ಆದ್ರೆ 25 ಲಕ್ಷ ಅಲ್ಲ 1 ಕೋಟಿ ಕೊಟ್ಟರು ಸತ್ತಿರುವ ಮಗ ಮತ್ತೆ ಹುಟ್ಟಿಬರಲು ಸಾದ್ಯವಿಲ್ಲ,,, ಎದೆ ಎತ್ತರಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡ ತಂದೆಯ ದುಃಖ ಮಾತ್ರ ಹೇಳತೀರದು. ಇನ್ನಾದ್ರು ದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ ಸರ್ಕಾರ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.