Chitradurga : ಮದುವೆ ಆಗುವಂತೆ ಅಪ್ರಾಪ್ತೆಗೆ ಕುಟುಂಬಸ್ಥರಿಂದಲೇ ಹಿಂಸೆ | ಒಬ್ಬಂಟಿಯಾಗಿ ಹೋರಾಡಿ ದಿಟ್ಟತನ ಪ್ರದರ್ಶಿಸಿದ ಬಾಲಕಿ

CHITRADURGA : ನಾನು ಚೆನ್ನಾಗಿ ಓದಬೇಕು, ನನಗೆ ಮದುವೆ ಮಾಡಬೇಡಿ ಅಂತಾ ಅಂಗಲಾಚಿದರೂ ಬಿಡದೇ ಹಿಂಸೆ ಕೊಟ್ಟು 8ನೇ ತರಗತಿ ಬಾಲಕಿಗೆ ಹೆತ್ತವರು ಬಾಲ್ಯವಿವಾಹ ಮಾಡಲು ಮುಂದಾಗಿದ್ದರು. ಆದರೆ ಹೆತ್ತವರು, ಸಂಬಂಧಿಕರ ವಿರುದ್ಧ ಬಾಲಕಿಯೊಬ್ಬಳೇ ದಿಟ್ಟತನದಿಂದ ಹೋರಾಡಿ ಬಾಲ್ಯ ವಿವಾಹದಿಂದ ಪಾರಾಗಿರುವ ಮನಕಲಕುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಜೂನ್‌ 4 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗ್ರಾಮವೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿಯನ್ನು ತನ್ನ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಲು ಬಾಲಕಿಯ ತಂದೆ- ತಾಯಿ ನಿರ್ಧರಿಸಿದ್ದರು. ಆದರೆ ಈ ಮದುವೆ ಬಗ್ಗೆ ಬಾಲಕಿಗೆ ಗೊತ್ತೇ ಇರಲಿಲ್ಲ, ಆದ್ಯಾವಾಗ ತನ್ನ ಮದುವೆ ವಿಚಾರ ಗೊತ್ತಾಗಿ ಮದುವೆಗೆ ನಿರಾಕರಿಸಿದ್ದಾಳೆ. ಅಪ್ಪ, ಅಮ್ಮ, ದೊಡ್ಡಮ್ಮ ನನಗೆ ಮದುವೆ ಬೇಡ, ತಾಳಿ ಕಟ್ಟಿಸಬೇಡಿ, ನಿಮ್ಮ ಕಾಲಿಗೆ ಬೀಳುತ್ತೇನೆ ಅಂತಾ ನೆಲದ ಮೇಲೆ ಬಿದ್ದು ಹೊರಳಾಡುತ್ತಾ ಗೋಗರೆದಿದ್ದಾಳೆ. ಆದರೆ ಬಾಲಕಿಯ ಮೊರೆಗೆ ಕಿವಿ ಕೊಡದ ಕುಟುಂಬಸ್ಥರು, ಸಂಬಂಧಿಕರು ಬಾಲಕಿಗೆ ಚಿತ್ರ ಹಿಂಸೆ ಕೊಟ್ಟು, ಹೊಡೆದು ಸೋದರ ಮಾವನಿಂದ ತಾಳಿ ಕಟ್ಟಿಸಲು ಮುಂದಾಗಿದ್ದಾರೆ.

ಇನ್ನು ಮನೆಯ ಹೊರಭಾಗದಲ್ಲೇ ಬಾಲಕಿಗೆ ತಾಳಿ ಕಟ್ಟುವ ಪ್ರಯತ್ನ ನಡೆದಿದ್ದು, 10 ರಿಂದ 15 ಮಂದಿ ಹಿಡಿದು ತಾಳಿ ಕಟ್ಟಿಸಲು ಪ್ರಯತ್ನಪಟ್ಟರು. ಆದರೆ ಬಾಲಕಿ ದಿಟ್ಟತನದಿಂದ ಓಡಿ ಬಂದು ಮದುವೆಯಿಂದ ತಪ್ಪಿಸಿಕೊಂಡಿದ್ದಾಳೆ. ವರ ತಾಳಿಯನ್ನು ಹಿಡಿದು ಬಾಲಕಿಯನ್ನು ಫಾಲೋ ಮಾಡಿದ್ದ. ಬಾಲಕಿಯ ತಾಯಿ, ಸಂಬಂಧಿಕರು ಆಕೆಯನ್ನು ಹಿಡಿದು ಕೆಳಗೆ ಬೀಳಿಸಿದರು. ಈ ವೇಳೆ ಬಾಲಕಿಗೆ ಗಾಯವೂ ಆಗಿತ್ತು. ಗಾಯವಾದರೂ ಕಾಪಾಡಿ ಕಾಪಾಡಿ ಅಂತಾ ಬಾಲಕಿ ಗೋಗೆರೆಯುತ್ತಿದ್ದಳು. ಬಾಲಕಿಯನ್ನು ಕಾಪಾಡಲು ಹೋದ ಅಕ್ಕ ಪಕ್ಕದ ಮನೆಯವರ ಮೇಲೂ ಹಲ್ಲೆ ಮಾಡಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬಾಲಕಿ ಮದುವೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಕೊನೆಗೇ ಒಬ್ಬಳೇ ಹೋರಾಟದಲ್ಲಿ ಗೆದ್ದು ಮದುವೆ ಎಂಬ ಗಂಡಾಂತರದಿಂದ ಮುಕ್ತಳಾಗಿದ್ದಾಳೆ.

ಇನ್ನು ಗ್ರಾಮದಲ್ಲಿ ನಡೆಯುತ್ತಿದ್ದ ಬಲವಂತದ ಬಾಲ್ಯವಿವಾಹ ಯತ್ನದ ವಿಡಿಯೋವನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಪೊಲೀಸರಿಗೆ ಕಳುಹಿಸಿಕೊಟ್ಟಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಲಕಿಯನ್ನು ರಕ್ಷಿಸಿ ಬಾಲ ಮಂದಿರಕ್ಕೆ ಸೇರಿಸಿದ್ದಾರೆ.  ಸದ್ಯ ಈ ಸಂಬಂಧ ಚಳ್ಳಕೆರೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಾಲಕಿಯ ತಾಯಿ, ಸೋದರ ಮಾವ, ಆತನ ಅಣ್ಣ, ಅತ್ತಿಗೆ, ಬಾಲಕಿಯ ಅಜ್ಜಿಯನ್ನು ವಶಕ್ಕೆ ಪಡೆದು ಎಲ್ಲರ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಆಗಲಿ ಹಲ್ಲೆ ಮಾಡಿದರೂ ದಿಟ್ಟತನದಿಂದ ಏಕಾಂಗಿಯಾಗಿ ಹೋರಾಡಿ ಬಾಲ್ಯವಿವಾಹದಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಂಡ ಬಾಲಕಿಗೆ ಹ್ಯಾಟ್‌ಸಾಫ್‌ ಹೇಳಲೇ ಬೇಕು.

Author:

...
Sushmitha N

Copy Editor

prajashakthi tv

share
No Reviews