BANGALORE : ನಂದಿ ಬೆಟ್ಟದಲ್ಲಿ ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ದಿಢೀರ್‌ ರದ್ದು

BANGALORE NEWS : ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಜೂನ್ 19ರಂದು ನಡೆಯಬೇಕಾಗಿದ್ದ 2025ನೇ ಸಾಲಿನ 13ನೇ ಸಚಿವ ಸಂಪುಟ ಸಭೆ ದಿಢೀರ್ ರದ್ದುಗೊಂಡಿದೆ. ಸಭೆಯನ್ನು ಈಗ ಬೆಂಗಳೂರಿನ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಸಚಿವ ಸಂಪುಟದ ಸರ್ಕಾರದ ಅಪರ ಕಾರ್ಯದರ್ಶಿ ಆರ್. ಚಂದ್ರಶೇಖರ್ ಅಧಿಕೃತ ಸೂಚನಾ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ಸಂಪುಟ ಸಭೆ ನಡೆಯಬೇಕಾಗಿತ್ತು. ನಂದಿ ಗಿರಿಧಾಮದಲ್ಲಿ ಸಭೆ ನಡೆಯುವ ನಿರೀಕ್ಷೆಯಿತ್ತು. ಆದರೆ, ಸ್ಥಳೀಯ ಸಮಸ್ಯೆಗಳ ಕುರಿತಂತೆ ರೈತರು ಹಾಗೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಭೆಗೆ ವಿರೋಧ ವ್ಯಕ್ತವಾಗಿತ್ತು.

ಕೋಲಾರ ಜಿಲ್ಲೆಯಲ್ಲಿ ಮಾವಿಗೆ ಬೆಂಬಲ ಬೆಲೆ ಘೋಷಣೆಗೆ ಒತ್ತಾಯ, ಬೆಂಗಳೂರು ಗ್ರಾಮಾಂತರದಲ್ಲಿ ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆಗಳು ಜೋರಾಗಿದ್ದು, ಇವುಗಳ ಬೆನ್ನಲ್ಲೇ ನಂದಿ ಬೆಟ್ಟದ ಸಭೆ ವಿವಾದಕ್ಕೆ ಗುರಿಯಾಗಿದೆ. "ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ಇಲ್ಲದಿದ್ದರೆ ಸಭೆ ಬೇಡ" ಎಂಬ ತೀವ್ರ ಧ್ವನಿ ಎತ್ತಿದ ರೈತ ಮುಖಂಡರ ಒತ್ತಡದ ನಡುವೆಯೇ ಕೊನೆ ಕ್ಷಣದಲ್ಲಿ ಸರ್ಕಾರ ಸಭೆಯ ಸ್ಥಳ ಬದಲಾಯಿಸಲು ನಿರ್ಧರಿಸಿದೆ.

ಸಭೆಯ ಕಾರ್ಯಸೂಚಿಯನ್ನು ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ. ಈ ನಿರ್ಧಾರದಿಂದಾಗಿ ನಂದಿ ಬೆಟ್ಟದಲ್ಲಿ ಸಭೆ ಆಯೋಜನೆಗಾಗಿ ನಡೆದಿದ್ದ ಸಿದ್ಧತೆಗಳೂ ಹಿನ್ನಡೆಗೊಂಡಿವೆ. ರಾಜ್ಯ ಸರ್ಕಾರದ ಈ ತೀರ್ಮಾನ ರಾಜ್ಯದ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

Author:

...
Keerthana J

Copy Editor

prajashakthi tv

share
No Reviews