ಬೆಂಗಳೂರು : ಬಿಜೆಪಿಯ ಇಬ್ಬರು ಶಾಸಕರಾದ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ನೀಡಿ, ಬಿಜೆಪಿ ಹೈಕಮಾಂಡ್ ಇಬ್ಬರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡುವ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಉತ್ತರ ಕನ್ನಡದ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಬೆಂಗಳೂರು ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಬಿಜೆಪಿ ಚಟುವಟಿಕೆಗಳಿಂದ ದೂರ ಉಳಿದು, ಪಕ್ಷದ ತತ್ವಗಳ ವಿರುದ್ಧ ನಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ, ಬಿಜೆಪಿ ಹೈಕಮಾಂಡ್ ಈ ಕ್ರಮ ಕೈಗೊಂಡಿದೆ. ಇದು ಬಿಜೆಪಿ ನೀಡಿದ ಮತ್ತೊಂದು ಸ್ಪಷ್ಟ ಸಂದೇಶವಾಗಿದ್ದು, ಪಕ್ಷದ ನಿಯಮ-ಶಿಸ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಯಾವುದೇ ರೀತಿಯ ಸಹಿಷ್ಣುತೆ ಇಲ್ಲ ಎಂಬುದನ್ನು ಈ ಕ್ರಮ ಮತ್ತೊಮ್ಮೆ ತೋರಿಸಿದೆ.
ಮುಂದೆ ಹೆಬ್ಬಾರ್ ಮತ್ತು ಸೋಮಶೇಖರ್ ರಾಜಕೀಯ ಭವಿಷ್ಯ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.