ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ಗೆ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ, ಕನ್ನಡ ಚಿತ್ರರಂಗದ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2 ವರ್ಷಗಳ ಗುತ್ತಿಗೆಗೆ ₹6 ಕೋಟಿ ರೂ. ಮುಂಗಡವಾಗಿ ನೀಡಿ ತಮನ್ನಾ ನೇಮಕಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದ ನಂತರ, ನಟಿಯರಾದ ರಮ್ಯಾ, ರಾಗಿಣಿ ಮತ್ತು ಕಾರುಣ್ಯ ರಾಮ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟಿ ರಾಗಿಣಿ “ಕನ್ನಡದವರನ್ನು ಬಿಟ್ಟು ಪರಭಾಷೆಯ ನಟಿಯರನ್ನು ಆಯ್ಕೆ ಮಾಡುವುದು ನಿಂದನೀಯ. ನಮ್ಮ ಸ್ಥಳೀಯ ನಟಿಯರು ಈ ಜಾಹೀರಾತಿಗಾಗಿ ಉಚಿತವಾಗಿ ಸಹ ಕಾರ್ಯನಿರ್ವಹಿಸಲು ಸಿದ್ಧರಾಗಿದ್ದರು. ಪ್ರಾದೇಶಿಕ ಬ್ರಾಂಡ್ಗೊಂದು ಪ್ರಾದೇಶಿಕ ಮುಖವನ್ನೇ ನೀಡಬೇಕು. ಹೊರಗಡೆಯಿಂದ ಸೆಲೆಬ್ರಿಟಿಗಳನ್ನು ಕರೆತರುವ ಅಗತ್ಯವೇ ಇಲ್ಲ" ಎಂದು ಹೇಳಿದ್ದಾರೆ.
ನಟಿ ರಮ್ಯಾ ಇನ್ಸ್ಟಾಗ್ರಾಮ್ನಲ್ಲಿ,“ಒಂದು ಉತ್ಪನ್ನವನ್ನು ಜನರಿಗೆ ಪರಿಚಯಿಸಲು ಹಲವಾರು ದಾರಿಗಳಿವೆ. ಅದಕ್ಕಾಗಿಯೇ ರಾಯಭಾರಿ ನೇಮಕ ಅಗತ್ಯವಿಲ್ಲ. ₹6 ಕೋಟಿ ಮೊತ್ತವನ್ನು ಈ ರೀತಿ ಖರ್ಚುಮಾಡುವುದು ದುರುಪಯೋಗವಾಗಿದೆ. ಜನರು ಸೆಲೆಬ್ರಿಟಿಗಳು ಬಳಸುತ್ತಾರೆ ಎಂದು ಸೋಪ್ನ್ನು ಉಪಯೋಗಿಸುವುದಿಲ್ಲ. ಉತ್ಪನ್ನದ ಗುಣಮಟ್ಟವೇ ಮುಖ್ಯ" “ಮೈಸೂರು ಸ್ಯಾಂಡಲ್ ಸೋಪ್ ಗೆ ಶತಮಾನಕ್ಕೂ ಹೆಚ್ಚು ಇತಿಹಾಸವಿದೆ. ಇದು ನಮ್ಮ ಹೆಮ್ಮೆಯ ಬ್ರಾಂಡ್. ಆಪಲ್ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಇಲ್ಲದೆಯೇ ಯಶಸ್ಸು ಸಾಧ್ಯವಾಯಿತು. ಹಾಗೆ ನೋಡಿದರೆ, ಗುಣಮಟ್ಟ ಮತ್ತು ನಂಬಿಕೆ ಮುಖ್ಯವಾದುದು" ಎಂದು ಟೀಕೆ ಮಾಡಿದ್ದಾರೆ.
ನಟಿ ಕಾರುಣ್ಯ ರಾಮ್ ಕೂಡ ಈ ತೀರ್ಮಾನವನ್ನು ಖಂಡಿಸಿದ್ದಾರೆ. “ನಮ್ಮದೇ ರಾಜ್ಯದ ಬ್ರಾಂಡ್ಗೆ ನಮ್ಮದೇ ಭಾಷೆಯ, ನಮ್ಮದೇ ಸಂಸ್ಕೃತಿಯ ಪ್ರತಿನಿಧಿಯು ಇದ್ದರೆ, ಜನರೊಂದಿಗೆ ಜಾಸ್ತಿ ಸಂಪರ್ಕ ಸಾದ್ಯವಾಗುತ್ತದೆ" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದ ರಾಜ್ಯ ಸರ್ಕಾರದ ತೀರ್ಮಾನ ಈಗ ವಿವಾದದ ಕೇಂದ್ರಬಿಂದುವಾಗಿದ್ದು, ಪ್ರಾದೇಶಿಕ ಅಭಿಮಾನಿ ವಲಯ ಮತ್ತು ಚಿತ್ರರಂಗದ ಮಧ್ಯೆ ಮಹತ್ವದ ಚರ್ಚೆಗೆ ಕಾರಣವಾಗಿದೆ.