ಬೆಂಗಳೂರು : ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಕೇಳಿಬಂದಿದ್ದ ಹನಿಟ್ರ್ಯಾಪ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನ್ನ ತನಿಖಾ ವರದಿಯನ್ನು ರಾಜ್ಯದ ಡಿಜಿಪಿ ಅವರಿಗೆ ಸಲ್ಲಿಸಿದೆ. ಈ ಪ್ರಕರಣವು ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡ ಬಳಿಕ ರಾಜ್ಯದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಮತ್ತು ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು.
ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಸ್ ಐಟಿ ರಚನೆ ಮಾಡಿ ತನಿಖೆ ನಡೆಸುವಂತೆ ಸೂಚಿಸಿತ್ತು. ಇದೀಗ ಎಸ್ ಐಟಿ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ಡಿಜಿಪಿಗೆ ವರದಿ ಸಲ್ಲಿಸಿದೆ. ಇನ್ನು ಕೆ.ಎನ್ ರಾಜಣ್ಣ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲದೆ, ಯಾವುದೇ ಮಾಹಿತಿ, ಸಾಕ್ಷಿಗಳನ್ನು ನೀಡಿಲ್ಲ. ಕೇವಲ ಹೇಳಿಕೆ ನೀಡಿದ್ದು ಬಿಟ್ಟರೆ ಯಾವುದೇ ಮಾಹಿತಿ ಕೊಡಲಿಲ್ಲ. ಸಚಿವರ ಆಪ್ತರನ್ನು, ಗನ್ ಮ್ಯಾನ್, ಸೆಕ್ಯೂರಿಟಿ ಹಾಗೂ ಸಚಿವರ ಪಿಎ ಅವರನ್ನು ವಿಚಾರಣೆ ಮಾಡಿದರೂ ಯಾವುದೇ ಸಾಕ್ಷಿಗಳು ಸಿಗಲಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಎಸ್ಐಟಿ ನೀಡಿರುವ ವರದಿಯನ್ನು ಡಿಜಿಪಿಗಳು ಈಗ ಪರಿಶೀಲನೆಗೆ ಒಳಪಡಿಸಲಿದ್ದು, ಪರಿಶೀಲನೆಯ ಬಳಿಕ ಅದನ್ನು ಗೃಹ ಸಚಿವ ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಲಾಗುತ್ತದೆ ಎನ್ನಲಾಗ್ತಿದೆ.