ಬೆಳಗಾವಿ:
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಹಿಟ್ ಆಂಡ್ ರನ್ ಮಾಡಿ ಪರಾರಿಯಾಗಿದ್ದ ಕ್ಯಾಂಟರ್ ಟ್ರಕ್ಗಾಗಿ ಪೊಲೀಸರ ಹುಡುಕಾಟ ತೀವ್ರಗೊಂಡಿದೆ. ಜನವರಿ 14 ರಂದು ನಡೆದ ಅಪಘಾತದಲ್ಲಿ ಸಚಿವೆ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಕಾಂಗ್ರೆಸ್ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಗಾಯವಾಗಿತ್ತು. ಹಾಗೂ ಸಚಿವೆಯ ಬೆನ್ನು ಮೂಳೆಗೆ ಸಹ ಪೆಟ್ಟಾಗಿತ್ತು. 13 ದಿನಗಳ ಬಳಿಕ ಸಚಿವೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಿಂದ ವಾಹನವು ಪಂಜಾಬ್ ಅಥವಾ ಹರಿಯಾಣದಿಂದ ಬಂದಿದ್ದು ಎಂದು ತಿಳಿದುಬಂದಿದೆ. ಹಿರೇಬಾಗೇವಾಡಿ ಟೋಲ್ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು 60 ಕ್ಯಾಂಟರ್ಗಳ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಆ ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಎಲ್ಲ ಕ್ಯಾಂಟರ್ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಹೇಳಿದ್ದಾರೆ.
ಸಚಿವೆಯ ಕಾರು ಚಾಲಕ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಕೇಸ್ ದಾಖಲಿಸಿದ್ದು, ಕ್ಯಾಂಟರ್ ಟ್ರಕ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗೂ ಅಪಘಾತದ ಬಳಿಕ ಕ್ಯಾಂಟರ್ ಲಾರಿ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸಚಿವೆಯ ಕಾರು ಚಾಲಕ ಹೇಳಿದ್ದಾರೆ.