BELAGAVI : ಬರೋಬ್ಬರಿ 18 ವರ್ಷಗಳ ಬಳಿಕ ಕನಸು ನನಸಾಗಿದೆ. ಆರ್ಸಿಬಿ (RCB) ಕೊನೆಗೂ ಕಪ್ ಗೆದ್ದಿದ್ದು, ಕೋಟ್ಯಂತರ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದೆ. ಅಭಿಮಾನಿಗಳು ಹೆಮ್ಮೆಯಿಂದ ಈ ಸಲ ಕಪ್ ನಮ್ದೇ ಅಲ್ಲ ನಮ್ದು ಅಂತ ಹೇಳುತ್ತಿದ್ದಾರೆ. ಅದೇ ರೀತಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಬೆಂಗಳೂರು ತಂಡ ಐಪಿಎಲ್ (IPL) ಟ್ರೋಫಿ ಗೆದ್ದ ಸಂಭ್ರಮದಲ್ಲಿ ಆರ್ಸಿಬಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಕೊಹ್ಲಿ (VIRAT KOHLI) ಅಭಿಮಾನಿಯೊಬ್ಬ ಆರ್ ಸಿಬಿ ಗೆಲುವಿನ ಸಂಭ್ರಮದಲ್ಲಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿ ಸಾವನ್ನಪ್ಪಿದ್ದಾನೆ.
ಅವರಾದಿ ಗ್ರಾಮದ ನಿವಾಸಿ ಮಂಜುನಾಥ ಕುಂಬಾರ (25) ಎಂಬುವರು ಮೃತ ದುರ್ದೈವಿಯಾಗಿದ್ದಾರೆ. ಮಂಜುನಾಥ್ ಅವರು ಕ್ರಿಕೆಟ್ ಹಾಗೂ ವಿಶೇಷವಾಗಿ ವಿರಾಟ್ ಕೊಹ್ಲಿಯ ಅಭಿಮಾನಿಯಾಗಿ ಗುರುತಿಸಿಕೊಂಡಿದ್ದರು. ಆರ್ಸಿಬಿ ಫೈನಲ್ ಮ್ಯಾಚ್ ಗೆದ್ದಿದ್ದಕ್ಕೆ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು. ಆದರೆ ಇದೇ ವೇಳೆ ಮಂಜುನಾಥ ಕುಣಿದು ಕುಪ್ಪಳಿಸುತ್ತಿದ್ದಾಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.