ಬೆಂಗಳೂರು : ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಬೆಂಗಳೂರು ನಗರದ ಟೌನ್ಹಾಲ್ನಲ್ಲಿ "ಜೈ ಹಿಂದ್ ಸಭಾ" ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಧರ ಪರಂಪರೆಯನ್ನು ಶ್ಲಾಘಿಸಿದ್ದು, ನಿವೃತ್ತ ಯೋಧರನ್ನು ಸನ್ಮಾನಿಸಿ ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರಿಗೆ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಡಿಸಿಎಂ ಶಿವಕುಮಾರ್ ಸೇರಿದಂತೆ, ನಿವೃತ್ತ ಯೋಧರು, ಯೋಧರ ಕುಟುಂಬದ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.
ಇನ್ನು ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಸೈನಿಕರು, ರೈತರು, ವೈದ್ಯರು, ಶಿಕ್ಷಕರು ನಮ್ಮ ತಂದೆ-ತಾಯಿಯಷ್ಟೇ ಸ್ಮರಣೀಯರು. ಯೋಧರು ತ್ಯಾಗ ಮನೋಭಾವದಿಂದ ದೇಶದ ರಕ್ಷಣೆಯಲ್ಲಿ ತೊಡಗಿದ್ದಾರೆ. ಆದರೆ ದೇಶದ ರಕ್ಷಣೆ ಕೇವಲ ಯೋಧರ ಜವಾಬ್ದಾರಿ ಅಲ್ಲ. ಇದು 140 ಕೋಟಿ ಭಾರತೀಯರ ಜವಾಬ್ದಾರಿ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. "ಇನ್ನುಮುಂದೆ ಯೋಧರ ಕ್ಯಾಂಟೀನ್ ಮೇಲೆ ಅಬಕಾರಿ ಸುಂಕ ವಿಧಿಸುವುದನ್ನು ನಿಲ್ಲಿಸಲಾಗುವುದು. ನಿವೃತ್ತ ಯೋಧರ ಕಲ್ಯಾಣಕ್ಕಾಗಿ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ," ಎಂದು ಅವರು ಭರವಸೆ ನೀಡಿದ್ದಾರೆ.