Bangalore : ಜೆಡಿಎಸ್-ಬಿಜೆಪಿ ಜಂಟಿ ಸುದ್ದಿಗೋಷ್ಠಿ | ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ

BANGALORE: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಲ್ತುಳಿತದಲ್ಲಿ ಅಮಾಯಕರ ಬಲಿ ಪಡೆಯಬೇಕಾದ ಸ್ಥಿತಿಯ ಹಿಂದೆ ಸರ್ಕಾರದ ನಿರ್ಲಕ್ಷ್ಯ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶಿಸಿದರು. “ಸರ್ಕಾರದ ವೈಯಕ್ತಿಕ ಪ್ರತಿಷ್ಠೆಗಾಗಿ ಈ ರೀತಿಯ ಭದ್ರತಾ ಕ್ರಮವಿಲ್ಲದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರ್ಸಿಬಿ ಜೊತೆ ಡಿಕೆಶಿ ಶೋ ಮಾಡಿದ್ರು. ಡಿಕೆಶಿಯ ಕಣ್ಣೀರು ಎಲ್ಲಾ ನಾಟಕ ಪೋಸ್ಟರ್‌ಗಾಗಿ ಪೋಸ್ ಕೊಟ್ಟಿದ್ದನ್ನು ನಾವೆಲ್ಲಾ ನೋಡಿದ್ದೇವೆ,” ಎಂದು ಎಚ್.ಡಿ.ಕೆ ವಾಗ್ದಾಳಿ ನಡೆಸಿದರು.

"ವಿಧಾನಸೌಧದ ಮುಂದೆ ಈ ರೀತಿಯ ಸಾರ್ವಜನಿಕ ಕಾರ್ಯಕ್ರಮ ಏಕೆ ಆಯೋಜಿಸಲಾಯಿತು? ಬೆಂಗಳೂರು ಪೊಲೀಸ್ ಕಮಿಷನರ್‌ ದಿನೇಶ್ ದಯಾನಂದ್ ಅವರು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ. ಆದರೆ ಸರ್ಕಾರ ನಿರ್ಧಾರ ತೆಗೆದುಕೊಂಡು, ಈಗ ಅಧಿಕಾರಿಗಳ ಮೇಲೆ ಹೊರೆ ಹಾಕುತ್ತಿದ್ದಾರೆ," ಎಂದು ಎಚ್.ಡಿ.ಕೆ ಗರಂ ಆದರು.

"ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿಸಿದ್ದೇ ಸಿಎಂ. ಈ ದುರಂತಕ್ಕೆ ಅವರೂ ಭಾಗಶಃ ಕಾರಣ. ತಮ್ಮ ತಪ್ಪು ಮುಚ್ಚಿಕೊಳ್ಳಲು ಅಧಿಕಾರಿಗಳ ಮೇಲೆ ಚಾಟಿ ಬೀಸುತ್ತಿದ್ದಾರೆ. ಗೃಹಸಚಿವ ಪರಮೇಶ್ವರ್ ಕೀ ಕೊಟ್ಟರೆ ಮಾತ್ರ ಮಾತನಾಡುತ್ತಾರೆ. ಸರ್ಕಾರದ ಮುಂದೆ ಅವರ ಆಟ ಏನೂ ನಡೆಯುವುದಿಲ್ಲ," ಎಂದರು.

ಇನ್ನು ಬಿಜೆಪಿ ನಾಯಕ ವಿಜಯೇಂದ್ರ ಅವರು ಎಚ್.ಡಿ.ಕುಮಾರಸ್ವಾಮಿಯ ಮಾತುಗಳಿಗೆ ಪೂರಕವಾಗಿ, ಈ ದುರಂತಕ್ಕೆ ಸರ್ಕಾರದ ನಿರ್ಲಕ್ಷ್ಯ ಮತ್ತು ಪಾರದರ್ಶಕತೆಯ ಕೊರತೆಯೇ ಕಾರಣವೆಂದು ಹೇಳಿದರು.

ಈ ವೇಳೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್‌ , ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಭಾಗಿಯಾಗಿದ್ದರು

Author:

...
Sushmitha N

Copy Editor

prajashakthi tv

share
No Reviews