Bangalore : ಕೆಲಸದ ಅವಧಿಯನ್ನು 10 ಗಂಟೆಗೆ ವಿಸ್ತರಿಸಲು ಸರ್ಕಾರದ ಚಿಂತನೆ | ಕಾರ್ಮಿಕ ಸಂಘಟನೆಗಳ ವಿರೋಧ

BANGALORE: ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ದಿನದ ಕಾರ್ಮಿಕ ಕೆಲಸದ ಗರಿಷ್ಠ ಅವಧಿಯನ್ನು 9 ಗಂಟೆಯಿಂದ 10 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯ ಕುರಿತು ಚರ್ಚೆ ನಡೆಸುತ್ತಿದೆ. ಈ ಕುರಿತು ಕಾರ್ಮಿಕ ಕಾನೂನು ತಿದ್ದುಪಡಿ ನಿರ್ಧಾರ ಚರ್ಚಾ ಹಂತದಲ್ಲಿದ್ದು, ಸರ್ಕಾರ ವಿವಿಧ ಕ್ಷೇತ್ರಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದೆ.

ಇಂದು ವಿಕಾಸಸೌಧದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು. ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಸಭೆ ಅಧ್ಯಕ್ಷತೆ ವಹಿಸಿ, ಹೊಸ ತಿದ್ದುಪಡಿ ಕುರಿತಂತೆ ಚರ್ಚೆ ನಡೆಸಿದರು.

ಸದ್ಯ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮ ಇದೆ. ಆದರೆ ಇದೀಗ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನ ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ. ಸದ್ಯ ಚರ್ಚಾ ಹಂತದಲ್ಲಿ ಇರುವ ತಿದ್ದುಪಡಿ ಪ್ರಸ್ತಾಪ, ಕಾನೂನು ರೂಪ ಸಿಗಬೇಕಾದರೆ ಸಂಪುಟ ಸಭೆಯಲ್ಲಿ ಚರ್ಚಿಸಬೇಕು

ಇನ್ನು ಈ ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು, ವಿವಿಧ ಕಾರ್ಖಾನೆಗಳ ಮಾಲೀಕರು ಹಾಗೂ ಕಾರ್ಮಿಕ ಸಂಘಟನೆಗಳ ಪ್ರಮುಖ ಮುಖಂಡರು ಹಾಜರಿದ್ದರು.

ಇನ್ನು ರಾಜ್ಯ ಸರ್ಕಾರದ ಈ ಚಿಂತನೆಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಕಾರ್ಮಿಕ ವಿರೋಧಿ ಕಾನೂನು ಜಾರಿ ಆಗಬಾರದು ಎಂದು ಆಗ್ರಹಿಸಿದ್ದಾರೆ. ಆದರೆ ಕಾರ್ಖಾನೆ, ಕಂಪನಿಗಳು, ಹೋಟೆಲ್ ಮಾಲೀಕರು ಮಾತ್ರ ಕಾನೂನು ತಿದ್ದುಪಡಿಯನ್ನು ಬೆಂಬಲಿಸಿವೆ

Author:

...
Sushmitha N

Copy Editor

prajashakthi tv

share
No Reviews