Bangalore : ಚಿನ್ನಸ್ವಾಮಿ ಕಾಲ್ತುಳಿತ ದುರಂತ | ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅಮಾನತು

BANGALORE : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಕುರಿತು ರಾಜ್ಯದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಕಮಿಷನರ್‌ ದಯಾನಂದ್‌ ಅಮಾನತು ಮಾಡಿದರು. ಇಂದು ಇನ್ನು ನಾಲ್ಕು ಜನರನ್ನು ಸರ್ಕಾರ ಅಮಾನತು ಮಾಡಿದೆ. ಇದರ ಬೆನ್ನಲ್ಲೆ ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದ್‌ ರಾಜ್‌ ರನ್ನು ಅಮಾನತು ಮಾಡಲಾಗಿದೆ.

2023ರ ಜೂನ್​ನಲ್ಲಿ ಕೆ. ಗೋವಿಂದರಾಜ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಆದರೆ, ಈಗ ಏಕಾಏಕಿ ಅವರ ನೇಮಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಅದರಂತೆ ಕೆ. ಗೋವಿಂದರಾಜ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣದಿಂದ ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆ.ಗೋವಿಂದರಾಜ್​​ಗೆ ಸರ್ಕಾರ ಗೇಟ್​ಪಾಸ್ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಕಾಲ್ತುಳಿತ ಸಂಭವಿಸಿ 11 ಜನ ಜೀವ ಕಳೆದುಕೊಂಡ ಬೆನ್ನಲ್ಲೇ, ಸರ್ಕಾರ ಗೋವಿಂದರಾಜ್​​ಗೆ ಕೊಕ್ ನೀಡಿದೆ. ಕೆ‌ಎಸ್‌ಸಿಎ ಪರವಾಗಿ ಸಿಎಂ ಮೇಲೆ ಒತ್ತಡ ಹಾಕಿ ಸನ್ಮಾನ ಕಾರ್ಯಕ್ರಮ ನಡೆಯಲು ಕಾರಣರಾಗಿದ್ದರೆಂಬ ಆರೋಪ ಕೆ.ಗೋವಿಂದರಾಜ್​ ಮೇಲಿದೆ. ಜೂನ್ 3 ರಂದು ಐಪಿಎಲ್ ಫೈನಲ್ ಮ್ಯಾಚ್​ ನಡೆದಿತ್ತು. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ, ಪಂಜಾಬ್ ಕಿಂಗ್ಸ್​ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಬೆನ್ನಲ್ಲೇ ರಾಜ್ಯ ಸರ್ಕಾರದ ವತಿಯಿಂದ ಮಾರನೇಯ ದಿನ ಅಂದರೆ ಜೂನ್ 4ರ ಮಧ್ಯಾಹ್ನ ವಿಧಾನಸೌಧ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಲ್ಲಿ ಆರ್​ಸಿಬಿ ತಂಡ ಹಾಗೂ ಮ್ಯಾನೇಜ್ಮೆಂಟ್​ಗೆ ಸರ್ಕಾರದ ವತಿಯಿಂದ ಸನ್ಮಾನ ಮಾಡಲಾಯಿತು.  ಇತ್ತ ಆರ್​ಸಿಬಿ ಮ್ಯಾನೇಜ್ಮೆಂಟ್ ಹಾಗೂ ಕೆಎಸ್​ಸಿಎ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಕ್ಟರಿ ಮೆರವಣಿಗೆ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಆರ್​ಸಿಬಿ ಅಭಿಮಾನಿಗಳನ್ನ ಆಹ್ವಾನಿಸಿತ್ತು. ಯಾವುದೇ ಪೂರ್ವ ತಯಾರಿ ಇಲ್ಲದೇ ಕಾರ್ಯಕ್ರಮ ಆಯೋಜನೆಗೊಂಡ ಪರಿಣಾಮ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಈ ಪ್ರಕರಣಕ್ಕೆ ರಾಜಕೀಯ ಕಾರ್ಯದರ್ಶಿಯೇ ನೇರ ಹೊಣೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಗೋವಿಂದರಾಜುರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews