ಕನ್ನಡ ಸಿನಿಮಾ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಅನುಷಾ ರೈ ಪ್ರಯಾಗ್ ರಾಜ್ ಕುಂಭಮೇಳಕ್ಕೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಬಂದಿದ್ದಾರೆ. ಬಿಗ್ ಬಾಸ್ ಸೀಸನ್ 11 ರಲ್ಲಿ ತಮ್ಮ ಕಲ್ಮಶವಿಲ್ಲದ ಆಟ ಹಾಗೂ ಮುಗ್ಧತೆಯ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಅನುಷಾ ರೈ. ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಕೆಲವೇ ದಿನವಾದರೂ ಇವರು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿಯೇ ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ಇವರು ಹೋದಲೆಲ್ಲಾ ಅಭಿಮಾನಿಗಳ ದಂಡೇ ಕಾಣಿಸಿಕೊಳ್ಳುತ್ತೆ. ಇದೀಗ ನಟಿ ಅನುಷಾ ರೈ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ನಡೆಯುತ್ತಿದೆ. ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇನ್ನು ಸ್ವಲ್ಪ ದಿನಗಳ ಕಾಲ ಮಾತ್ರ ಕುಂಭಮೇಳ ನಡೆಯಲಿದೆ. ಹಾಗಾಗಿ ದೇಶ, ವಿದೇಶದಿಂದ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗಲು ಜನ ಪ್ರಯಾಗ್ ರಾಜ್ ಗೆ ಆಗಮಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಸಹ ಇದಕ್ಕೆ ಹೊರತಾಗಿಲ್ಲ. ಈ ಹಿಂದೆ ನಟಿ, ನಿರೂಪಕಿ ಅನುಶ್ರೀ, ರಾಜ್ ಬಿ ಶೆಟ್ಟಿ, ಕಿರಣ್ ರಾಜ್, ಶ್ರೀನಿಧಿ ಶೆಟ್ಟಿ, ಸೇರಿ ಕನ್ನಡದ ಹಲವು ನಟ ನಟಿಯರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಇದೀಗ ನಟಿ ಅನುಷಾ ರೈ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪುಣ್ಯ ಸ್ನಾನ ಮಾಡಿದ್ದಾರೆ
ಪ್ರಯಾಗ್ ರಾಜ್ನ ಮಹಾ ಕುಂಭಮೇಳ ನೋಡುತ್ತಲೇ ಹಾಕಿತ್ತು ಹೃದಯ ತಾಳ. ಗಂಗಾ ಯಮುನಾ ಸರಸ್ವತಿಯ ತ್ರಿವೇಣಿ ಸಂಗಮ ಒಮ್ಮೆ ಮುಳುಗೆದ್ದರೆ ಮನದಲ್ಲಿ ಮಹಾ ಸಂಭ್ರಮ, ಜೊತೆಯಲ್ಲಿ ಕೋಟ್ಯಾಂತರ ಭಕ್ತರ ಸಮಾಗಮ. ಬೆಳಗಲಿ ನಮ್ಮ ಹಿಂದೂ ಧರ್ಮ, ಕಳೆಯಲಿ ಎಲ್ಲ ಪಾಪ ಕರ್ಮ, ಕಡೆಗೂ ಆಯ್ತು ಪುಣ್ಯ ಸ್ನಾನ, ಎದೆಯಲ್ಲಿ ಸದಾ ಶಿವನದ್ದೇ ಧ್ಯಾನ ಎಂದು ಬರೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳ ಜನವರಿ 13ರಂದು ಆರಂಭಗೊಂಡಿತ್ತು. ಫೆಬ್ರವರಿ 3 ರಂದು ಕೊನೆಯ ಅಮೃತ ಸ್ನಾನ ನಡೆದಿತ್ತು. ಇದೀಗ ಮಹಾ ಕುಂಭಮೇಳದ ಕೊನೆಯ ಪುಣ್ಯ ಸ್ನಾನ ಫೆಬ್ರವರಿ 26ರಂದು ಮಹಾಶಿವರಾತ್ರಿಯಂದು ನಡೆಯಲಿದೆ. ಹೀಗಾಗಿ ಈಗಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದು ಪುಣ್ಯ ಸ್ನಾನ ಮಾಡಿ ಹೋಗುತ್ತಿದ್ದಾರೆ.