ಹಾವೇರಿ : ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆಯೆಂಬ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಗೆ ನಟ ಚೇತನ್ ಅಹಿಂಸಾ ತೀವ್ರವಾಗಿ ಪ್ರತಿಸ್ಪಂದಿಸಿದ್ದಾರೆ. ಹಾವೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಕಮಲ್ ಹಾಸನ್ ಒಬ್ಬ ಪ್ರತಿಭಾವಂತ ನಟ. ಆದರೆ ಅವರು ನೀಡಿದ ಹೇಳಿಕೆ ಶುದ್ಧ ಸುಳ್ಳು. ಕನ್ನಡ ತಮಿಳಿನಿಂದ ಹುಟ್ಟಿಲ್ಲ. ನಾವು ಆ ಮಾತನ್ನು ಒಪ್ಪಲಾರೆವು,” ಎಂದು ಹೇಳಿದ್ಧಾರೆ.
ಹಾವೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಚೇತನ್, “ಕನ್ನಡ ಮತ್ತು ತಮಿಳು ಎರಡೂ ದ್ರಾವಿಡ ಭಾಷೆಗಳಾಗಿದ್ದು, ಸಹೋದರಿ ಭಾಷೆಗಳೆಂದು ಪರಿಗಣಿಸಬಹುದು. ಆದರೆ ತಮಿಳು ತಾಯಿ ಅಥವಾ ತಂದೆ ಎಂಬುದನ್ನು ಒಪ್ಪಿಕೊಳ್ಳುವುದು ವೈಜ್ಞಾನಿಕವಾಗಿಯೂ ಸತ್ಯವಲ್ಲ,” ಎಂದು ಸ್ಪಷ್ಟಪಡಿಸಿದರು. “ಸುಳ್ಳು ತಿಳಿದಾಗ, ಅದನ್ನು ಸರಿಪಡಿಸುವ ವಿನಯವಿರಬೇಕು. ಆದರೆ ಕಮಲ್ ಹಾಸನ್ ಅವರಿಗೆ ಅಂತಹ ವಿನಯವೇ ಕಾಣಿಸುತ್ತಿಲ್ಲ. ಅವರು ತಿಳಿದಿರುವ ಸತ್ಯವನ್ನು ಕೂಡ ಒಪ್ಪಿಕೊಳ್ಳದೆ, ಸುಳ್ಳಿನಲ್ಲಿ ತಲೆ ಎತ್ತುತ್ತಿದ್ದಾರೆ,” ಎಂದು ಚೇತನ್ ವಾಗ್ದಾಳಿ ನಡೆಸಿದರು.
ತಮಿಳುನಾಡಿನ ರಾಜಕಾರಣಿ ತೋಲ್ ತಿರುಮಾವಲವನ್ ಅವರು ಉಲ್ಲೇಖಿಸಿದ ಲಿಂಗುವಿಸ್ಟಿಕ್ ರಾಬರ್ಟ್ ಕಾಲ್ಡ್ವೆಲ್ ವಿಚಾರಕ್ಕೂ ಚೇತನ್ ಉತ್ತರಿಸಿದ್ದಾರೆ. “ಕಾಲ್ಡ್ವೆಲ್ 170 ವರ್ಷಗಳ ಹಿಂದೆ ಬಿಳಿ ಜನಾಂಗ ಮತ್ತು ಮೇಲ್ಜಾತಿಯವರನ್ನ ದ್ರಾವಿಡರಿಗಿಂತ ಶ್ರೇಷ್ಠರೆಂದು ಹೇಳಿದ್ದನು. ಇಂತಹ ವ್ಯಕ್ತಿಯು ನೀಡಿದ ಭಾಷಾ ಅಭಿಪ್ರಾಯವನ್ನು ನಾವೇಕೆ ಒಪ್ಪಬೇಕು?”.“ತೆಲುಗು ಸಾಹಿತ್ಯ ಕನ್ನಡಕ್ಕಿಂತ ಹೀನ ಎಂದು ಹೇಳುವುದು ಕೂಡ ಮೂರ್ಖತನ. ಕನ್ನಡದ ಬಗ್ಗೆ ಯಾರೇನಾದರೂ ತಿರಸ್ಕಾರಕಾರಿ ಮಾತು ಹೇಳಿದರು ಅಂದರೆ ಅದು ನಮ್ಮೆಲ್ಲರ ಭಾವನೆಗೆ ತೀವ್ರವಾಗಿ ನೋವು ಉಂಟುಮಾಡುತ್ತದೆ,” ಎಂದು ಚೇತನ್ ಹೇಳಿದರು.
ಈ ಹೇಳಿಕೆಗಳಿಂದಾಗಿ ಕನ್ನಡ ಅಭಿಮಾನಿಗಳ ನಡುವೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಮಲ್ ಹಾಸನ್ ಕ್ಷಮೆ ಕೇಳಬೇಕೆಂಬ ಬೇಡಿಕೆಯು ಹೆಚ್ಚು ವ್ಯಕ್ತವಾಗುತ್ತಿದೆ.