MANGALORE : ನಂತೂರ್ ಬಳಿ ರಸ್ತೆ ಅಪಘಾತ | ಕೇರಳ ಮೂಲದ ವೈದ್ಯ ಮೃತ್ಯು

MANGALORE NEWS : ಮಂಗಳೂರಿನ ನಂತೂರಿನ ತಾರೆತೋಟ ಬಳಿ ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ, ಕಾರು ಚಾಲಕನಾಗಿದ್ದ ಫಿಸಿಯೋಥೆರಪಿ ವೈದ್ಯ ಡಾ. ಮುಹಮ್ಮದ್ ಅಮಲ್ (29) ದುರ್ಮರಣ ಹೊಂದಿದ ದುಃಖದ ಘಟನೆ ನಡೆದಿದೆ.

ಮೂಲತಃ ಕೇರಳದ ಆಲಪ್ಪುಝ ನಿವಾಸಿಯಾಗಿದ್ದ ಡಾ. ಅಮಲ್, ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಪಾಠ್ಯಕ್ರಮ ಮುಗಿಸಿ, ಅದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ರಾತ್ರಿ 11:45ರ ಸುಮಾರಿಗೆ, ಅವರು ತಮ್ಮ ಗೆಳತಿ ಮತ್ತು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ನಂತೂರಿನಿಂದ ಪಂಪ್ವೆಲ್ ಕಡೆಗೆ ಸಾಗುತ್ತಿದ್ದಾಗ, ಹೆದ್ದಾರಿ ಪ್ರಾಧಿಕಾರದ ಕಚೇರಿ ಬಳಿ ಕಾರು ಜಾರಿ ನಿಯಂತ್ರಣ ತಪ್ಪಿ, ವೇಗದಿಂದ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮವಾಗಿ ಡಾ. ಅಮಲ್ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಕೊಂಡೊಯ್ಯಲಾಗಿದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ಇದ್ದ ವಿದ್ಯಾರ್ಥಿನಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಸ್ಥಳಕ್ಕೆ ತಕ್ಷಣವೇ ಪೊಲೀಸರು ಧಾವಿಸಿ ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ಭಾರೀ ಮಳೆ ಹಾಗೂ ಅತಿವೇಗ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

Author:

...
Keerthana J

Copy Editor

prajashakthi tv

share
No Reviews