ಗದಗ : ನರೇಗಲ್ನ ಅನ್ನದಾನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಹಾಗೂ ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ ರಾಕೇಶ್ ನಾಗೇಶಪ್ಪ (16) ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷೆ-1 ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದ ಕಾರಣ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಗದಗ ಜಿಲ್ಲೆಯ ನರೇಗಲ್ ಎಂಬಲ್ಲಿ ನಡೆದಿದೆ.
ಇನ್ನು ಕುಟುಂಬದ ಮಾಹಿತಿಯ ಪ್ರಕಾರ, ಫಲಿತಾಂಶ ಪ್ರಕಟವಾದ ದಿನದಿಂದಲೇ ಮನನೊಂದುಕೊಂಡಿದ್ದ ರಾಕೇಶ್, ನರೇಗಲ್ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಶಾಲೆಯ ಆವರಣದಲ್ಲಿರುವ ಗಿಡಕ್ಕೆ ನೇಣು ಬಿಗಿದುಕೊಂಡು ಜೀವತ್ಯಾಗ ಮಾಡಿದ್ದಾನೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಿದ್ದಾರೆ.
ರಾಕೇಶ್ ಕನ್ನಡದಲ್ಲಿ 60, ಇಂಗ್ಲಿಷ್ನಲ್ಲಿ 48 ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದರೊಂದಿಗೆ, ಹಿಂದಿ (34), ಗಣಿತ (34), ವಿಜ್ಞಾನ (35), ಸಮಾಜ ವಿಜ್ಞಾನ (27) ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ.
ಕ್ರೀಡಾ ಕ್ಷೇತ್ರದಲ್ಲಿ ಚುರುಕಾಗಿದ್ದ ರಾಕೇಶ್, ಶಾಲೆಯ ಕಬಡ್ಡಿ ತಂಡದ ನಾಯಕತ್ವ ವಹಿಸಿಕೊಂಡು, ತಂಡವನ್ನು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗಳಿಗೆ ನೇತೃತ್ವ ನೀಡಿದ್ದ. ಕೆಜಿ ಕಬಡ್ಡಿ ಪಂದ್ಯಾವಳಿಗಳಲ್ಲಿ ಪ್ರಶಂಸನೀಯ ಪ್ರದರ್ಶನ ನೀಡಿದ್ದ ಈ ಯುವ ಆಟಗಾರ, ಮುಂದೆ ಉತ್ತಮ ಭವಿಷ್ಯ ಹೊಂದಿದ್ದ ಎಂದು ಶಾಲಾ ಸಿಬ್ಬಂದಿ ಆಕ್ರಂದಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ರಾಕೇಶ್ ಪರೀಕ್ಷೆ-2ರ ಪ್ರವೇಶ ಪತ್ರವನ್ನು ಪಡೆದುಕೊಂಡಿದ್ದರೂ, ನಿರಾಶೆಯಿಂದ ಈ ಕ್ರಮಕೈಗೊಂಡಿದ್ದಾನೆ ಎಂಬುದು ದುಃಖದ ಸಂಗತಿಯಾಗಿದೆ.