MANGALORE NEWS : ಮಂಗಳೂರಿನಲ್ಲಿ ದಾರುಣ ಘಟನೆ ನಡೆದು ಒಂದು ಪುಟ್ಟ ಮಗು ಜೀವ ಕಳೆದುಕೊಂಡಿದೆ. ಮನೆಯೊಳಗೆ ತಂದೆ ಬಿಸಾಕಿದ ಬೀಡಿಯ ತುಂಡನ್ನು ನುಂಗಿದ ಪರಿಣಾಮ ಅಸ್ವಸ್ಥಗೊಂಡಿದ್ದ 10 ತಿಂಗಳ ಮಗು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ಅಡ್ಯಾರ್ ನಿವಾಸಿಯಾದ ಬಿಹಾರ ಮೂಲದ ದಂಪತಿಗಳ ಮಗುವಾದ ಅನೀಶ್ ಕುಮಾರ್ (10 ತಿಂಗಳು) ಎಂಬವನು ಜೂನ್ 14ರಂದು ಮಧ್ಯಾಹ್ನ ಈ ದಾರುಣ ಘಟನೆಗೆ ಗುರಿಯಾಗಿದ್ದಾನೆ. ಅಸುನೀಗಿದ ಮಗುವಿನ ತಂದೆ ವಿವಾಹ ಸಂಭ್ರಮಗಳ ಡೆಕೊರೇಷನ್ ಕೆಲಸ ಮಾಡುತ್ತಿ ದ್ದರು ಎಂಬ ಮಾಹಿತಿ ಲಭಿಸಿದೆ. ಮಧ್ಯಾಹ್ನ 1.30ರ ಸುಮಾರಿಗೆ ಮಗುವು ಆಟವಾಡುತ್ತಿದ್ದ ಸಂದರ್ಭದಲ್ಲಿ ತಂದೆ ಬಿಸಾಕಿದ ಬೀಡಿ ತುಂಡನ್ನು ಮಗು ನುಂಗಿದ್ದು, ತಕ್ಷಣವೇ ಅಸ್ವಸ್ಥವಾಗಿದೆ. ಅಷ್ಟರಲ್ಲೇ ಮಧ್ಯಾಹ್ನ 3.30ರ ವೇಳೆಗೆ ಮಗುವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತಕ್ಷಣ ಚಿಕಿತ್ಸೆ ಆರಂಭಿಸಿದರೂ, ಜೂನ್ 15ರಂದು ಬೆಳಗ್ಗೆ 10.25ರ ಸಮಯದಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಮಗುವಿನ ತಾಯಿ ಲಕ್ಷ್ಮೀದೇವಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು,, "ಮನೆಯೊಳಗೆ ಬೀಡಿ ಸೇದಿ ಬಿಸಾಕಬಾರದೆಂದು ಅನೇಕ ಬಾರಿ ಗಂಡನಿಗೆ ಮನವಿ ಮಾಡಿದ್ದರೂ, ಅವರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ," ಎಂದು ಹೇಳಿದ್ದಾರೆ. ಇನ್ನು ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.