ತುಮಕೂರು : ಕೇವಲ ಎರಡೇ ದಿನಗಳಲ್ಲಿ ಐಪಿಎಲ್ ಫೈನಲ್ ಮ್ಯಾಚ್ ಇದ್ದು ಆರ್ಸಿಬಿ ಫ್ಯಾನ್ಸ್ನಲ್ಲಿ ಉತ್ಸಾಹ, ಕುತೂಲಹ ಹೆಚ್ಚಿದೆ. ಈ ಮಧ್ಯೆ ತುಮಕೂರು ಗ್ರಾಮಾಂತರ ಕ್ಷೇತ್ರದ ರಂಗನಾಥಪುರದಲ್ಲಿ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕರುನಾಡ ವಿಜಯಸೇನೆ ವತಿಯಿಂದ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕರುನಾಡ ವಿಜಯಸೇನೆ ವತಿಯಿಂದ ಮೊದಲ ವರ್ಷದ ರಂಗನಾಥಪುರದಲ್ಲಿ ಚಾಂಪಿಯನ್ಸ್ ಲೀಗ್ ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ಈ ಕ್ರಿಕೆಟ್ ಲೀಗ್ ನಡೆಯಲಿದ್ದು, ಸುಮಾರು ಒಂಭತ್ತು ತಂಡಗಳು ಭಾಗಿಯಾಗಿವೆ. ಇನ್ನು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಶಾಸಕ ಗೌರಿಶಂಕರ್ ಪುತ್ರ ರಾಹುಲ್ ಗೌರಿಶಂಕರ್ ಭಾಗಿಯಾಗಿ, ಕ್ರಿಕೆಟ್ ಆಟಗಾರರಿಗೆ ಜೋಶ್ ತುಂಬಿದರು. ಗೌರಿಶಂಕರ್ ಪುತ್ರನನ್ನು ಕಂಡು ಆಟಗಾರರಲ್ಲಿ ಉತ್ಸಾಹ ಹೆಚ್ಚಾಯ್ತು. ಕ್ರಿಕೆಟ್ ಲೀಗ್ನಲ್ಲಿ ಭಾಗಿಯಾಗಿದ್ದ ರಾಹುಲ್ ಗೌರಿಶಂಕರ್ಗೆ ಕ್ರಿಕೆಟ್ ಆಟಗಾರರು ಸನ್ಮಾನ ಮಾಡಿದರು.
ಇನ್ನು ಈ ವೇಳೆ ಮಾತನಾಡಿದ ರಾಹುಲ್ ಗೌರಿಶಂಕರ್, 18 ವರ್ಷಗಳ ನಂತರ ಆರ್ಸಿಬಿ ಫೈನಲ್ ತಂಡಕ್ಕೆ ಹೋಗಿದ್ದು, ಈ ಬಾರಿ ಕಪ್ಪು ನಮ್ಮದೇ, ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು. ಇನ್ನು ನಮ್ಮ ತಂದೆಯವರು ಕ್ರಿಕೆಟ್ಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ನಾನು ಸಹ ಮುಂದಿನ ದಿವಸಗಳಲ್ಲಿ ಕ್ರೀಡೆಗೆ ಬೆಂಬಲ ನೀಡುತ್ತಿದ್ದೇನೆ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸದ್ದಿಲ್ಲದೇ ಕಾಣಿಸಿಕೊಳ್ತಿರೋ ರಾಹುಲ್ ಗೌರಿಶಂಕರ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ತಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲಿ ಇದೇ ರೀತಿಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಿ ಎಂದು ಅಭಿಪ್ರಾಯ ಪಟ್ಟರು.