ತುಮಕೂರು:
ಕಿಕ್ಕೇರಿಸಿಕೊಳ್ಳೋವರೆಗೂ ಮಾತ್ರ ಫ್ರೆಂಡ್ಸ್ ಆಮೇಲೆ ದುಷ್ಮನ್ಗಳು ಅನ್ನೋದನ್ನ ಇವರು ತೋರಿಸಿಕೊಟ್ಟಿದ್ದಾರೆ. ಒಂದೇ ಟೇಬಲ್ನಲ್ಲಿ ಕುಳಿತು ಕಂಠಪೂರ್ತಿ ಕುಡಿದು ಕಿಕ್ಕೇರಿಸಿಕೊಂಡ ಬಳಿಕ ಗಲಾಟೆಗಳಾಗೊರೊದನ್ನ ನೋಡಿದ್ದೇವೆ. ಈಗ ತುಮಕೂರಿನಲ್ಲೂ ಅಂತಹದ್ದೇ ನಶೆಯ ಗಲಾಟೆ ನಡೆದಿದೆ. ಹೌದು ನಶೆಯಲ್ಲಿ ನಟೋರಿಯಸ್ ರೌಡಿ ರೋಹಿತ್ ಗ್ಯಾಂಗ್ನ ಭರತ್ ಹಾಗೂ ಪುಡಿ ರೌಡಿ ಧನುಶ್ ನಡುವೆ ಮಾರಾಮಾರಿ ನಡೆದಿದೆ.
ತುಮಕೂರು ನಗರದ ಹೊರವಲಯದ ಯಲ್ಲಾಪುರದ ಬಳಿಯ ಕುಶಲ್ ಬಾರ್ನಲ್ಲಿ ಶುಕ್ರವಾರ ರೌಡಿಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸರಿಗೆ ರೌಡಿಗಳನ್ನು ಕಂಟ್ರೋಲ್ ಮಾಡೋದೆ ದೊಡ್ಡ ತಲೆನೋವಾಗಿದೆ, ಶುಕ್ರವಾರ ಬಾರ್ ಗೆ ಬಂದ ನಟೋರಿಯಸ್ ರೌಡಿಶೀಟರ್ ರೋಹಿತ್ನ ಸಹಚರ ಭರತ್ ಹಾಗೂ ಪುಡಿ ರೌಡಿ ಧನುಶ್ ಇಬ್ಬರು ಒಂದೇ ಟೇಬಲ್ನಲ್ಲಿ ಸರ್ವ್ ಮಾಡಿಕೊಂಡು ಎಣ್ಣೆ ಹೊಡೆದಿದ್ದಾರೆ. ಎಣ್ಣೆ ಒಳಗೊಗೊವರೆಗೂ ಫ್ರೆಂಡ್ಸ್ ಆಗಿದ್ದ ಭರತ್ ಹಾಗೂ ಧನುಶ್ ಕಿಕ್ಕು ಏರುತ್ತಿದ್ದಂತೆ ಮಾತುಕತೆ ಜೋರಾಗಿದೆ. ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಭರತ್ ಅಲ್ಲೇ ಇದ್ದ ಎಣ್ಣೆ ಬಾಟಲ್ನನ್ನು ಕೈಗೆ ಎತ್ತಿಕೊಂಡು ಧನುಶ್ಗೆ ಹೊಡೆದಿದ್ದಾನೆ. ಇದರಿಂದ ಧನುಶ್ ಕುತ್ತಿಗೆಗೆ ಗಾಯವಾಗಿ ರಕ್ತ ಸುರಿದಿದೆ.
ಇಷ್ಟಕ್ಕೆ ನಿಲ್ಲದ ಗಲಾಟೆ ಧನುಷ್ ಕೂಡ ಭರತ್ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದು, ತಲೆ ಮೇಲೆ ಹಾಲೋಬ್ರಿಕ್ಸ್ ಎತ್ತಿ ಹಾಕಿದ್ದಾನೆ. ಇದರಿಂದ ಭರತ್ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿಸಿ ಕ್ಯಾಮೆರಾ ಫುಟೇಜ್ನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸ್ತಿದ್ದಾರೆ. ಸದ್ಯ ಆರೋಪಿ ಧನುಶ್ನನ್ನು ವಶಕ್ಕೆಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಇನ್ನು ಗಲಾಟೆ ಮಾಡಿಕೊಂಡ ಇಬ್ಬರು ಕೂಡ ರೌಡಿಸಂ ಬ್ಯಾಕ್ಗ್ರೌಂಡ್ ಇದ್ದು, ಒಟ್ಟಿಗೆ ಬಂದು ಬಾರ್ನಲ್ಲಿ ಕುಡಿದು ಹೋಗ್ತಾ ಇದ್ರು, ಆದರೆ ಮೊನ್ನೆ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಬಾರ್ನ ಕ್ಯಾಶಿಯರ್ ಹೇಳಿದರು.
ಇನ್ನು ಧನುಶ್ ಕಳೆದ ಎರಡು ದಿನಗಳಿಂದ ಕುಶಾಲ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ರೂಮ್ ಮಾಡಿಕೊಂಡಿದ್ದನಂತೆ. ಬಾರ್ಗೆ ಬಂದ ಭರತ್, ಧನುಶ್ ಜೊತೆ ಪಾರ್ಟಿ ಮಾಡಿದ್ದು ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದ್ದು, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.