TUMAKURU : ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ "ಹೇಮಾವತಿ ನೀರಾವರಿ ಹೋರಾಟ ಸಮಿತಿ" ಪದಾಧಿಕಾರಿಗಳು ಇಂದು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಶಾಸಕರಾದ ಬಿ. ಸುರೇಶ್ ಗೌಡ, ಜಿ.ಬಿ. ಜ್ಯೋತಿಗಣೇಶ್, ಹೆಬ್ಬಾಕ ರವಿಶಂಕರ್, ಎ. ಗೋವಿಂದರಾಜು, ದಿಲೀಪ್ ಕುಮಾರ್, ವೆಂಕಟೇಗೌಡ, ಲೋಕೇಶ್, ಯೋಗಾನಂದ ಎಸ್.ಆರ್. ಗೌಡ, ಬ್ಯಾಟರಂಗೇಗೌಡ ಸೇರಿದಂತೆ ಹಲವು ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಸುದ್ದಿ ಗೋಷ್ಟಿಯಲ್ಲಿ ಬಿಜೆಪಿ ಮುಖಂಡರು ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಡಿಕೆಶಿ ನೀಡುತ್ತಿರುವ ಹೇಳಿಕೆಗಳು, ಪರಮೇಶ್ವರ್ ಅವರು ನೀಡುತ್ತಿರುವ ಹೇಳಿಕೆಗಳು ಪರಸ್ಪರ ವಿರೋಧವಾಗಿದೆ. ಈ ದ್ವಂದ್ವ ಹೇಳಿಕೆಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ,” ಎಂದು ಬಿಜೆಪಿ ನಾಯಕರು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಬಿಜೆಪಿ ಮುಖಂಡರು, “ಸರ್ಕಾರ ಜನಪರ ಕೆಲಸ ಮಾಡಲು ವಿಫಲವಾಗಿದೆ. ಕೆಲಸ ಮಾಡಬೇಕಾದರೆ ನಾವು ಹೋರಾಟ ಮಾಡಿಯೇ ಮಾಡುತ್ತೇವೆ,” ಎಂದು ಎಚ್ಚರಿಸಿದರು. ಇನ್ನು ಇದೇ ವೇಳೆ ತಾಂತ್ರಿಕ ಸಮಿತಿ ವರದಿ ನಮಗೆ ತಿಳಿಸಿಲ್ಲ, ಎಲ್ಲೆಲ್ಲಿ ನೀರು ಹೋಗುತ್ತದೆ ಎಂಬ ಮಾಹಿತಿ ಸ್ಪಷ್ಟವಿಲ್ಲ. ಐಐಎಸ್ (IISc) ಲೆವೆಲ್ ತಾಂತ್ರಿಕ ವರದಿ ಬೇಕು, ನಮಗೆ ನಿವೃತ್ತ ಇಂಜಿನಿಯರ್ಗಳ ವರದಿ ಸಾಕಾಗದು ಎಂದರು. ಇದು ಕೇವಲ ಬಿಜೆಪಿ ಹೋರಾಟವಲ್ಲ, ಕಾಂಗ್ರೆಸ್ ಶಾಸಕರು ಕೂಡ ಬೆಂಬಲಿಸಿದ್ದಾರೆ ಎಂದರು.
FIR, ಲಾಠಿ, ಬೆದರಿಕೆಗೆಲ್ಲಾ ನಮ್ಮ ಹೋರಾಟವನ್ನು ನಿಲ್ಲಿಸಲ್ಲ. ಇದು ಒಬ್ಬ ವ್ಯಕ್ತಿಯ ಹೋರಾಟವಲ್ಲ, ಜಿಲ್ಲೆಯ ಹಕ್ಕಿನ ಪ್ರಶ್ನೆ. ಪಾಕಿಸ್ತಾನ ಜಿಂದಾಬಾದ್ ಅನ್ನೋರ ಮೇಲೆ FIR ಹಾಕೋ ತಾಕತ್ತು ಇಲ್ಲ, ಆದರೆ ರೈತರ ಮೇಲೆ ಎಫ್ ಐಆರ್ ಹಾಕ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.