MT KRISHNAPPA : ಕೇಂದ್ರ ಸಚಿವ ವಿ. ಸೋಮಣ್ಣ ನಾಳೆ ಸುಂಕಾಪುರದಲ್ಲಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಲಿದ್ದು, ಈ ಕುರಿತು ಶಾಸಕ ಎಂ.ಟಿ. ಕೃಷ್ಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಕೂಡಾ ನಾಳೆ ಸ್ಥಳಕ್ಕೆ ಹೋಗ್ತೀನಿ. ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.
"ಈವರೆಗೆ 13 ಎಫ್ಐಆರ್ ಹಾಕಿದ್ದಾರೆ. 100 ಎಫ್ಐಆರ್ ಅಂದ್ರೆ ಇನ್ನೂ 87 ಬಾಕಿ ಇದೆ, ಹಾಕಿಕೊಳ್ಳಲಿ. ನಾವು ಬೆದರುವುದಿಲ್ಲ," ಎಂದು ಅವರು ಸ್ಪಷ್ಟಪಡಿಸಿದರು. "ಎಸ್ಪಿ ಮತ್ತು ಐಜಿ ಮುಂದೆ ನಾವು ರೈತರ ಹಾಗೂ ಸ್ವಾಮೀಜಿಗಳ ಮೇಲೆ ಹಾಕಿದ ಎಫ್ಐಆರ್ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದೇವೆ. ನಮ್ಮದು ತೆಗಿರಿ ಅಂತ ಕೇಳಿಲ್ಲ. ಆದರೆ ಜಿಲ್ಲಾಧಿಕಾರಿ ಸಚಿವರು ಸ್ವಾಮೀಜಿಗಳ ಎಫ್ಐಆರ್ ತೆರವುಗೊಳಿಸುವ ಭರವಸೆ ನೀಡಿದ್ದಾರೆ, ಧನ್ಯವಾದ ತಿಳಿಸುತ್ತೇನೆ" ಎಂದರು.
ಆರ್ ಸಿಬಿ ಸಂಭ್ರಮಾಚರಣೆ ವೇಳೆ 11 ಮಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ರಾಜೀನಾಮೆ ಕೊಡೋದಲ್ಲ ಇಡೀ ಸರ್ಕಾರನೇ ವಜಾ ಮಾಡಬೇಕು. ಆರ್ ಸಿಬಿ ಗೆದ್ದಿದ್ದು ನನಗೂ ಹೆಮ್ಮೆ. ಸಮಸ್ಯೆ ಏನು ಅಂದ್ರೆ ಒಂದೆರೆಡು ದಿನ ಲೇಟ್ ಆಗಿ ಕಾರ್ಯಕ್ರಮ ಮಾಡಬೇಕಿತ್ತು. ಆವತ್ತು ಇಡೀ ರಾತ್ರಿಯಿಂದ ಬೆಳಗ್ಗೆವರೆಗೆ ಯುವಕರೆಲ್ಲ ಪಟಾಕಿ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ. ಎರಡು ದಿನ ಬಿಟ್ಟು ಕಾರ್ಯಕ್ರಮ ಮಾಡಿದ್ರೆ ಈ ಅನಾಹುತ ಆಗ್ತಿರಲಿಲ್ಲ. 35 ಸಾವಿರ ಜನ ಕುಳಿತುಕೊಳ್ಳುವ ಜಾಗದಲ್ಲಿ 3 ಲಕ್ಷ ಜನ ಸೇರಿದ್ರೆ ಏನಾಗುತ್ತೆ. ಎಲ್ಲಾದ್ರು ಸಿಟಿಯಿಂದ ಹೊರಗಡೆ 50 ಎಕರೆ ಜಾಗದಲ್ಲಿ ಟೆಂಟ್ ಹಾಕಿ ಮಾಡಿದ್ರೆ ಈ ಅನಾಹುತ ಆಗ್ತಿರಲಿಲ್ಲ.
ಈ ದುರಂತದ ಹೊಣೆಯನ್ನ ಸರ್ಕಾರನೇ ಹೊರಬೇಕು. ಅಮಾಯಕ ಪೊಲೀಸರನ್ನ ಸಂಸ್ಪೆಂಡ್ ಮಾಡೊದಲ್ಲ. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು. ಮುಖ್ಯಮಂತ್ರಿ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಇಡೀ ಸರ್ಕಾರ ಇದಕ್ಕೆ ನೇರಹೊಣೆ. ಸರ್ಕಾರ ಮಾಡಿರೋ ತಪ್ಪು ಮುಚ್ಚಿಕೊಳ್ಳೋಕೆ ಪರಿಹಾರ ಕೊಡ್ತಿದ್ದಾರೆ. ಇನ್ನು 50 ಲಕ್ಷ ಕೊಡಿ ಬಿಡಿ, ಕೂಡಲೇ ಈ ಸರ್ಕಾರವನ್ನ ವಜಾ ಮಾಡಬೇಕು. ಗೃಹ ಸಚಿವರು ರಾಜೀನಾಮೆ ಕೊಡೋದಲ್ಲ. ಇಡೀ ಸರ್ಕಾರನೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.