KUNIGAL NEWS : ಬೆಂಗಳೂರಿನಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ. ಅದರಲ್ಲಿ ತುಮಕೂರಿನ ನಾಗಸಂದ್ರ ಗ್ರಾಮದ ಯುವಕ ಮನೋಜ್ ಕೂಡ ಸೇರಿದ್ದಾರೆ. ಇದೇ ಮನೋಜ್ ಮನೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮೊಮ್ಮಗನ ಅಗಲಿಕೆಯಿಂದ ನೊಂದಿದ್ದ ಅಜ್ಜಿ ಕೊನೆಯುಸಿರೆಳೆದಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ ಒಟ್ಟು 11 ಆರ್ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಅದರಲ್ಲಿ ಮನೋಜ್ ಕೂಡ ಒಬ್ಬರಾಗಿದ್ದರು. ಮೊಮ್ಮಗನ ಹಠಾತ್ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ದೇವಿರಮ್ಮ, ಕಳೆದ ಕೆಲ ದಿನಗಳಿಂದ ತೀವ್ರ ಮನೋವ್ಯಥೆಯಿಂದ ಬಳಲುತ್ತಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದ ಅವರು, ಮೊಮ್ಮಗನ ಚಿಂತೆ ಮತ್ತು ನೋವಿನಿನಲ್ಲೇ ಕೊನೆಯುಸಿರೆಳೆದಿದ್ದಾರೆ.
ದೇವಿರಮ್ಮ ಅವರಿಗೆ ನಿನ್ನೆ ಗ್ರಾಮಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಕೆಲವೇ ದಿನಗಳ ಹಿಂದಷ್ಟೇ, ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರದ ಚೆಕ್ನ್ನು ಮನೋಜ್ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಈಗ ಮನೆಯ ಹಿರಿಯ ಜೀವವನ್ನೂ ಕಳೆದುಕೊಂಡು, ಕುಟುಂಬ ಮತ್ತಷ್ಟು ಆಘಾತದಲ್ಲಿ ಒಳಗಾಗಿದೆ.