TIPTUR NEWS : ತುಮಕೂರು ಜಿಲ್ಲೆಯಲ್ಲಿ ಇಂದು 10 ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ ಘಟನೆ ಶಾಕ್ ಉಂಟುಮಾಡಿದೆ. ಈ ದಾಳಿ ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷ್ಮಿ ನಾರಾಯಣ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಜರುಗಿದೆ.
ಲೋಕಾಯುಕ್ತ ಇಲಾಖೆ ಆದೇಶದಂತೆ ತುಮಕೂರು ಜಿಲ್ಲೆಯ ಕೊರಟಗೆರೆ ಮಧುಗಿರಿ ಪಾವಗಡ ಸಿರಾ ಗುಬ್ಬಿ ತಿಪಟೂರು ತುರುವೇಕೆರೆ ಚಿಕ್ಕನಾಯಕನಹಳ್ಳಿ, ಕುಣಿಗಲ್, ಕಚೇರಿಗಳಿಗೆ 50ಕ್ಕೂ ಹೆಚ್ಚು ಸಿಬ್ಬಂದಿಯಿಂದ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ,
ಪ್ರತಿ ಕಚೇರಿಗೂ ಪ್ರತ್ಯೇಕ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ತಂಡಗಳನ್ನು ನಿಯೋಜಿಸಲಾಗಿದ್ದು, ಇಲಾಖೆಗಳ ದಾಖಲೆ ಪರಿಶೀಲನೆ, ಭೂ ದಾಖಲೆಗಳು, ವಿಲೇವಾರಿ ಆಗದ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ.
ಇನ್ನು ತಿಪಟೂರು ಪಟ್ಟಣದ ತಹಸೀಲ್ದಾರ್ ಕಚೇರಿ, ಭೂಮಾಪನ ಇಲಾಖೆ, ಭೂ ದಾಖಲೆ ವಿಭಾಗ ಮತ್ತು ಉಪಖಜಾನೆ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಕೆ. ಸುರೇಶ್ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಜನರಿಂದ ಬಂದ ಅರ್ಜಿ ಹಾಗೂ ಸಮಸ್ಯೆಗಳ ಮೇಲಿನ ನಿರ್ಲಕ್ಷ್ಯದ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ತಿಪಟೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ಭಾಸ್ಕರ್, ಯಶೋಧ, ಬಸವರಾಜ್ ಸೇರಿರುವ ತಂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ದಾಖಲೆ ಪರಿಶೀಲನೆ, ಲೋಪಗಳ ಪತ್ತೆ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ.