KORATAGERE :ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆ ಹೊನ್ನೂರು ಖಾಸಾ ಶಾಖಾ ಮಠದಲ್ಲಿ, 19ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ತಾಲ್ಲೂಕು ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸಹಯೋಗದೊಂದಿಗೆ ಮಠದ ಆವರಣದಲ್ಲಿ ಪುಸ್ತಕ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಗ್ಗಿಹಳ್ಳಿ ರಾಮಕೃಷ್ಣಾಶ್ರಮದ ಶ್ರೀ ರಮಾನಂದ ಸ್ವಾಮೀಜಿಗಳು ದೀಪ ಬೆಳಗುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಕರ್ನಾಟಕ ರಾಜ್ಯ ಗೃಹಸಚಿವರ ಜಿಲ್ಲಾ ವಿಶೇಷ ಕರ್ತವ್ಯಾಧಿಕಾರಿಯಾದ ಡಾ. ಕೆ. ನಾಗಣ್ಣ ಭಾಗವಹಿಸಿದರು.
ಸಿದ್ದರಬೆಟ್ಟದ ಪೀಠಾಧ್ಯಕ್ಷ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಮಠದಲ್ಲಿ ‘ಪುಸ್ತಕ ದಾಸೋಹ’ ಎಂಬ ಜ್ಞಾನಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಉತ್ತೇಜಿಸುವ ಉದ್ದೇಶ ಇದಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಪುಸ್ತಕ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳು ಪುಸ್ತಕ ದಾಸೋಹದಲ್ಲಿ ಪಾಲ್ಗೊಂಡು ತಾವು ತಂದಂತಹ ಒಂದು ಪುಸ್ತಕ ನೀಡಿ ಪುಸ್ತಕ ದಾಸೋಹದಲ್ಲಿ ಸಂಗ್ರಹಿಸಿರುವ ಹತ್ತು ಸಾವಿರ ಪುಸ್ತಕಗಳಲ್ಲಿ ಎರಡು ಪುಸ್ತಕಗಳನ್ನು ಮಾತ್ರ ಕೊಂಡೊಯ್ಯಲು ಸೂಚಿಸಿ ವಿದ್ಯಾರ್ಥಿಗಳಿಗೆ ಶುಭುವನ್ನು ಹಾರೈಸಿದರು.
ಇನ್ನು ಗೃಹ ಸಚಿವರ ಜಿಲ್ಲಾ ವಿಶೇಷ ಕರ್ತವ್ಯವಾಧಿಕಾರಿ ಡಾ. ಕೆ. ನಾಗಣ್ಣ ಮಾತನಾಡಿ, “ಪರಿವರ್ತನೆ ಜಗದ ನಿಯಮ. ಮಠಗಳು ಹಳೆಯ ಕಾಲದಿಂದಲೂ ಜ್ಞಾನ ಬೆಳಕು ಹಂಚುವ ಕಾರ್ಯದಲ್ಲಿ ಮುಂಚೂಣಿಯಲ್ಲಿವೆ. ಈ ರೀತಿಯ ಕಾರ್ಯಕ್ರಮಗಳು ನಮ್ಮ ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸಲು ಬಹುಮುಖ್ಯವಾಗಿವೆ. ಶಿಕ್ಷಣದಿಂದ ಯಾರು ಕೂಡ ವಂಚಿತರಾಗಬಾರದು ಶಿಕ್ಷಣದಿಂದಲೇ ಜ್ಞಾನ ವೃದ್ಧಿಯಾಗುತ್ತದೆ ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಮಠ-ಮಾನ್ಯಗಳು ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ ಎಂದರು. ನಂತರ ಡಾ.ಕೆ.ನಾಗಣ್ಣಗೆ ಸನ್ಮಾನಿಸಿ ಆಶೀರ್ವಾದ ನೀಡಲಾಯಿತು.
ಈ ವೇಳೆ ಚಿಕ್ಕ ತೊಟ್ಲುಕೆರೆ ಅಟವಿ ಮಠದ ಶ್ರೀ ಅಟವಿ ಸಿದ್ದಲಿಂಗ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಶ್ರೀ ಸಿದ್ದಲಿಂಗ ದೇಶಿ ಕೇಂದ್ರ ಸ್ವಾಮೀಜಿ, ಚಿ. ಚಿಮ್ಮಲಗಿ ಮಠದ ಶ್ರೀ ಸಿದ್ದಾರೇಣುಕಾ ಶಿವಾಚಾರ್ಯ ಸ್ವಾಮೀಜಿ, ತೆವಡೆಹಳ್ಳಿ ಮಠದ ಶ್ರೀ ಗೋಕುಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೂದಗವಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಖಂಡರಾಧ್ಯ, ಬಿಪಿಎಸ್ ಕುಮಾರ್, ಹಿರಿಯ ಪತ್ರಕರ್ತರಾದ ಪದ್ಮರಾಜ್, ಕಾಂಗ್ರೆಸ್ ಮುಖಂಡರಾದ ಕೋಡಿತಿಮ್ಮನಹಳ್ಳಿ ಪುಟ್ಟರಾಜು, ಟಿ.ಆರ್.ಅರವಿಂದ್, ಗ್ರಂಥಾಲಯ ಮೇಲ್ವಿಚಾರಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಿವಮೂರ್ತಿ ಮುಂತಾದವರು ಹಾಜರಿದ್ದರು.