SHIVAMOGGA NEWS : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆ ಒಂದು ಮೂರು ವರ್ಷದ ಬಾಲಕನ ಪ್ರಾಣವನ್ನು ಕಸಿದುಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಲಾರಿ ಡಿಕ್ಕಿಗೆ ಬಾಲಕ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ.
ಮೃತ ಬಾಲಕನನ್ನು ಶಿರಸಿಯ ಅತಾವುಲ್ಲಾ ಖಾನ್ ಹಾಗೂ ಫರೀನಾ ಬೇಗಂ ದಂಪತಿಯ ಪುತ್ರ, ಮುಹಮ್ಮದ್ ಆಹಿಲ್ ಖಾನ್ (3) ಎಂದು ಗುರುತಿಸಲಾಗಿದೆ. ಅಂಗನವಾಡಿಯಲ್ಲಿ ಇದ್ದ ಆಹಿಲ್, ಅಜ್ಜಿಯನ್ನು ನೋಡುತ್ತಿದ್ದಂತೆ ರಸ್ತೆ ದಾಟಲು ಹೊರಟ ಸಂದರ್ಭದಲ್ಲಿ, ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತನಾಗಿದ್ದಾನೆ. ಲಾರಿ ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಈ ಘಟನೆಗೆ ಕಾರಣ, ಎಂದು ಬಾಲಕನ ಅಜ್ಜಿ ನಸೀಮಾ ಬಾನು ನೀಡಿದ ದೂರಿನಂತೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆಯ ನಂತರ ಸ್ಥಳದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಮೃತ ಬಾಲಕನ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.