BELAGAVI NEWS : ಪೂರ್ವ ಮುಂಗಾರು ಬಳಿಕ ಸೈಲೆಂಟ್ ಆಗಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಹೌದು, ನಿನ್ನೆ ಸಂಜೆ ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು. ಭಾರಿ ಮಳೆಗೆ ಇಲ್ಲಿನ ಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದವು. ರಸ್ತೆ ಮೇಲೆ ರಭಸವಾಗಿ ನೀರು ಹರಿದ ಪರಿಣಾಮ ಎರಡು ಗಂಟೆ ಸಂಚಾರ ಬಂದ್ ಆಗಿತ್ತು. ವಾಹನ ಸವಾರರು ಪರದಾಡಿದರು. ಹೊಲಗಳು ನದಿಯ ಸ್ವರೂಪ ಪಡೆದುಕೊಂಡಿದ್ದವು. ಕಣ್ಣು ಹಾಯಿಸಿದಲ್ಲೆಲ್ಲಾ ನೀರೇ ನೀರು. ಮಳೆರಾಯ ಮತ್ತೆ ಕೃಪೆ ತೋರಿದ್ದರಿಂದ ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ಸಂತಸಗೊಂಡಿದ್ದಾರೆ. ಅದೇ ರೀತಿ ಹಾರೂಗೊಪ್ಪ ಅಕ್ಕಪಕ್ಕದ ಚಚಡಿ, ಗೊಂತಮಾರ ಸೇರಿ ಮತ್ತಿತರ ಗ್ರಾಮಗಳಲ್ಲೂ ಉತ್ತಮ ಮಳೆಯಾಗಿದೆ.