ತುಮಕೂರು :
ಅಭಿಮಾನಿಗಳ ಅಪ್ಪು ನಮ್ಮನ್ನು ಅಗಲಿ 5 ವರ್ಷ ತುಂಬ್ತಾ ಇದ್ರೂ ಕೂಡ ಫ್ಯಾನ್ಸ್ ಕ್ರೇಜ್ ಮಾತ್ರ ಕಡಿಮೆ ಆಗ್ತಾ ಇಲ್ಲ. ಪುನೀತ್ ಹೆಸರಲ್ಲಿ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಅಭಿಮಾನಿಗಳು ಮಾಡ್ತಾ, ಅಪ್ಪು ಹೆಸರನ್ನು ಸ್ಮರಿಸುತ್ತಿದ್ದಾರೆ. ಅಪ್ಪು ಹುಟ್ಟಿದ ಹಬ್ಬ ಅಥವಾ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳು ಅನ್ನಸಂತರ್ಪಣೆ ಮಾಡಿಸುತ್ತಾರೆ. ಅಲ್ಲದೇ ಪುನೀತ್ ರಾಜ್ಕುಮಾರ್ ಅಗಲಿಕೆ ನಂತರ ಅದೆಷ್ಟೋ ಮಂದಿ ಹೋಟೆಲ್ ಮಾಲೀಕರು ಅಪ್ಪು ಹೆಸರನ್ನೇ ತಮ್ಮ ಹೊಟೇಲ್ಗೆ ಇಟ್ಟು, ಕಡಿಮೆ ದರದಲ್ಲಿ ಹಸಿದು ಬಂದವರಿಗೆ ಹೊಟ್ಟೆ ತುಂಬಿಸುವ ಸಮಾಜಮುಖಿ ಕೆಲಸ ಮಾಡ್ತಾ ಇದ್ದಾರೆ.
ತುಮಕೂರಿನ ಎಸ್.ಎಸ್ ಪುರಂನ ಅಪ್ಪು ಹೋಟೇಲ್ನಲ್ಲಿ ಪುನೀತ್ ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಮ್ಮ ಹೋಟೆಲ್ಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಿದ್ದರು. ಹೋಟೆಲ್ನಲ್ಲಿ ಅಪ್ಪು ಅವರ ದೊಡ್ಡ ಫೋಟೋ ಇಟ್ಟು ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಹೆಸರಲ್ಲಿ ಕೇಸರಿ ಬಾತ್, ಟಮೋಟ್ ಬಾತ್, ಮಜ್ಜಿಗೆ ವಿತರಿಸಿ ಪುನೀತ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ರು. ನೂರಾರು ಮಂದಿ ಅನ್ನ ಸಂತರ್ಪಣೆಯಲ್ಲಿ ಭೋಜನ ಸವಿದು ಅಪ್ಪುಗೆ ಜೈಕಾರ ಕೂಗಿದರು.
ಈ ವೇಳೆ ಅಪ್ಪು ಹೋಟೆಲ್ ಮಾಲೀಕ ನಾಗರಾಜು ಮಾತನಾಡಿ, ನಮ್ಮ ಕುಟುಂಬ ಪೂರ್ತಿ ಅಪ್ಪು ಅಭಿಮಾನಿಗಳು, ಆದ್ದರಿಂದಲೇ ನಮ್ಮ ಹೋಟೆಲ್ಗೆ ಅಪ್ಪು ಹೆಸರಿಟ್ಟಿದ್ದೇವೆ. ನಾವು ನಾಲ್ಕು ವರ್ಷದಿಂದಲೂ ಕೂಡ ಅಪ್ಪು ಸರ್ ಅವರ ಪುಣ್ಯಸ್ಮರಣೆ ಹಾಗೂ ಹುಟ್ಟುಹಬ್ಬವನ್ನು ನಮ್ಮ ಮನೆಯ ಹಬ್ಬದ ರೀತಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಬಂದಂತಹ ಎಲ್ಲ ಅಭಿಮಾನಿಗಳಿಗೆ ನಾವು ಅಪ್ಪು ಸರ್ ಅವರ ಹುಟ್ಟಿದ ಹಬ್ಬದ ದಿನ ಉಚಿತವಾಗಿ ಅನ್ನ ಸಂದರ್ಭದಲ್ಲಿ ಮಾಡುತ್ತೇವೆ ಎಂದರು.
ಈ ವೇಳೆ ಅಭಿಮಾನಿಯೊಬ್ಬರು ಮಾತನಾಡಿ, ಅಪ್ಪು ಸರ್ ಎಲ್ಲೂ ಹೋಗಿಲ್ಲ ನಮ್ಮ ಜೊತೆ ಇದ್ದಾರೆ. ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ನಮ್ಮ ಜೊತೆ ಇದ್ದಾರೆ , ಜೊತೆಗಿರದ ಜೀವ ಎಂದಿಗಿಂತ ಜೀವಂತ ಎನ್ನುವಂತೆ ನಾವು ಮಾಡುವ ಒಳ್ಳೆ ಕೆಲಸಗಳಲ್ಲಿ ಅಪ್ಪು ಸರ್ ಅವರನ್ನು ಕಾಣುತ್ತಾ ಹೋಗ್ಬೇಕು ಎಂದರು.