SHIVAMOGGA NEWS : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಭೂತನಗುಡಿ ಬಡಾವಣೆಯ 700 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಭೂತಪ್ಪನ ದೇವಾಲಯದಲ್ಲಿ ನೆನ್ನೆ ರಾತ್ರಿ ಗ್ರಿಲ್ ಕಟ್ ಮಾಡಿ ಕಾಣಿಕೆ ಹುಂಡಿಯನ್ನು ಕದ್ದಿರುವ ಘಟನೆ ನಡೆದಿದೆ.
ಕಳ್ಳರು ದೇವಾಲಯದ ಗೋಡೆಯಲ್ಲಿರುವ ಲೋಹದ ಗ್ರಿಲ್ ಅನ್ನು ಕಟ್ ಮಾಡಿ ಒಳಗೆ ನುಗ್ಗಿದ್ದಾರೆ. ಇನ್ನು ದೇವಾಲಯದಲ್ಲಿ ಸುಮಾರು ಮೂರು ವರ್ಷದಿಂದ ಕಾಣಿಕೆ ಹಣ ಎಣಿಕೆ ಮಾಡದ ಹುಂಡಿಯನ್ನೇ ಕದ್ದೊಯ್ದಿದ್ದಾರೆ. ಹುಂಡಿಯಲ್ಲಿ ಲಕ್ಷಾಂತರ ರೂ. ಹಣ ಇತ್ತು ಎನ್ನಲಾಗಿದೆ.
ಇನ್ನು ಈ ಘಟನೆ ಇಂದು ಬೆಳಿಗ್ಗೆ ಅರ್ಚಕರಿಗೆ ಗೋಚರವಾಗಿದೆ. ಅವರು ದೇವಾಲಯಕ್ಕೆ ಬಂದು ದೇವಾಲಯದ ಒಳಗಿನ ಹುಂಡಿಯ ಬೀಗ ಒಡೆದಿರುವುದನ್ನು ಕಂಡು ತಕ್ಷಣ ದೇವಾಲಯದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಭದ್ರಾವತಿಯ ಹಳೇನಗರ ಠಾಣಾ ಪೊಲೀಸರಿಗೆ ವಿಷಯ ತಿಳಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಫಿಂಗರ್ಪ್ರಿಂಟ್ ತಜ್ಞರು ಹಾಗೂ ಶ್ವಾನದಳವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ಕೈಗೊಂಡಿದ್ದಾರೆ. ದೇವಾಲಯವು ಜನನಿಬಿಡ ರಸ್ತೆಯಲ್ಲಿದ್ದರೂ, ಕಳ್ಳರು ತಮ್ಮ ಸಾಹಸದಿಂದ ಇದೇ ಮೊದಲ ಬಾರಿಗೆ ಈ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ಈ ದೇವಾಲಯದಲ್ಲಿ ಭಕ್ತರು ಭೂತಪ್ಪ, ಗಣಪತಿ ಹಾಗೂ ಶನಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇನ್ನು ಭೂತಪ್ಪನ ದೇವಾಲಯದ ಕಳ್ಳತನವಾಗಿರುವುದು ಭಕ್ತರಲ್ಲಿ ತೀವ್ರ ಆಕ್ರೋಶ ಹಾಗೂ ಬೇಸರ ಉಂಟುಮಾಡಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.