ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ಮದುವೆಯ ಸಂಭ್ರಮದ ನಡುವೆ ನಗು ಬದಲಾಗಿ ಕಣ್ಣೀರು ಹರಿದಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮದುವೆಗೂ ಮುನ್ನ, ತನ್ನ ಜೀವನದ ಭವಿಷ್ಯದ ಬಗ್ಗೆ ಭಯಗೊಂಡ 24 ವರ್ಷದ ಯುವತಿ ಶೃತಿ ಶಂಕರ್ ಬುರುಡ, ತನ್ನ ಅರಿಶಿನ ಶಾಸ್ರ್ತದ ದಿನವೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
24 ವಯಸ್ಸಿನ ಶೃತಿ ಶಂಕರ್ ಬುರುಡ ಎಂಬ ಯುವತಿಗೆ ಮೇ 25ಕ್ಕೆ ಬೆಳಗಾವಿಯ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು. ಮದುವೆ ಹಿಂದಿನ ದಿನ ಅಂದ್ರೆ ಮೇ 24ನೇ ತಾರೀಖಿನಂದು ರಾತ್ರಿ ಅರಿಶಿನ ಹಚ್ಚುವ ಕಾರ್ಯಕ್ರಮವಿತ್ತು. ತನ್ನ ಸೊಸೆಯನ್ನಾಗಿ ಮಾಡಿಕೊಳ್ಳುವ ಅತ್ತೆ, ಕುರುಡು ಎಂದು ತಿಳಿದ ನಂತರ ವಧು ಅದೇ ರಾತ್ರಿ ಬಾವಿಗೆ ಜಿಗಿದಿದ್ದಾಳೆ. ರಾತ್ರಿ ಪೂರ್ತಿ ಶೃತಿಗಾಗಿ ಹುಡುಕಿದ ಮನೆಯವರಿಗೆ, ಬೆಳಗ್ಗೆ ಬಾವಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದೆ.
ಶೃತಿಗೆ ತನ್ನ ಭವಿಷ್ಯದ ಮನೆಗೆ ಸೇರಿದ ಅತ್ತೆ ಕುರುಡು ಎಂಬ ವಿಷಯವು ತೀವ್ರ ಆತಂಕ ಹುಟ್ಟಿಸಿದ್ದಿತ್ತು. ಈಗ ಕೂಡ ತಾನು ತಂದೆ-ತಾಯಿಯ ಸೇವೆಯನ್ನು ನೋಡಿಕೊಳ್ಳುತ್ತಿದ್ದಂತೆ, ಅತ್ತೆಯವರ ಆರೈಕೆಯ ಹೊಣೆ ತನ್ನ ಮೇಲೆ ಬರುವದನ್ನು ಭಾವಿಸಿದ್ದಳು. ಇದರಿಂದಾಗಿ, ಈ ಮದುವೆ ಬೇಡ ಎಂದು ತಾಯಿ-ತಂದೆಗೆ ಮನವಿ ಮಾಡಿದ್ದಳು. ಆದರೆ ಅವಳ ಮನವಿಗೆ ಸ್ಪಂದನೆ ದೊರೆತಿಲ್ಲ.
“ನನ್ನ ಮಾತಿಗೆ ಯಾರೂ ಬೆಲೆ ಕೊಡುತ್ತಿಲ್ಲ, ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂಬ ಅಳಲಿನ ಮಾತುಗಳನ್ನು ಹೊತ್ತ ಶೃತಿ, ಅರಿಶಿನ ಶಾಸ್ತ್ರದ ರಾತ್ರಿಯೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಈ ಸಂಬಂಧ ಚಿಕ್ಕೋಡಿ ತಾಲೂಕಿನ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.