ಬೆಂಗಳೂರು : ನಟ ದರ್ಶನ್ ಅವರು "ಡೆವಿಲ್" ಸಿನಿಮಾದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 1ರಿಂದ 25ರ ವರೆಗೆ, 25 ದಿನಗಳ ಕಾಲ ದುಬೈ ಮತ್ತು ಯುರೋಪ್ಗೆ ಪ್ರಯಾಣಿಸಲು ಅನುಮತಿ ಕೋರಿ, ಅವರು ಸಿಆರ್ಪಿಸಿ ಸೆಕ್ಷನ್ 439(1)(ಬಿ) ಅಡಿಯಲ್ಲಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್ ಅವರು ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಹಾಡಿನ ಶೂಟ್ಗಾಗಿ ವಿದೇಶಕ್ಕೆ ತೆರಳಬೇಕಿದೆ. ಹೀಗಾಗಿ 25 ದಿನಗಳ ಕಾಲ ವಿದೇಶಕ್ಕೆ ತೆರಳಲು ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ.
ದರ್ಶನ್ ವಿರುದ್ಧ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ, ಅವರಿಗೆ ವಿದೇಶಕ್ಕೆ ತೆರಳಲು ಅವಕಾಶ ನೀಡಬಾರದು ಎಂದು ವಿಶೇಷ ಸಾರ್ವಜನಿಕ ಅಭಿಯೋಜಕರು (SPP) ಆಕ್ಷೇಪಣೆ ಸಲ್ಲಿಸಿದ್ದಾರೆ. "ದರ್ಶನ್ ವಿದೇಶಕ್ಕೆ ತೆರಳಿದರೆ ಅವರು ಮತ್ತೆ ಭಾರತಕ್ಕೆ ಮರಳಿ ಬರುವ ಬಗ್ಗೆ ಅನುಮಾನವಿದೆ. ಹೀಗಾಗಿ ಅವರ ವಿದೇಶ ಪ್ರಯಾಣಕ್ಕೆ ನ್ಯಾಯಾಲಯದಿಂದ ಅನುಮತಿ ನೀಡಬಾರದು.” ಎಂದು ಆಕ್ಷೇಪಣೆ ಸಲ್ಲಿಸಲಾಗಿದೆ.
ದರ್ಶನ್ ಸಲ್ಲಿಸಿರುವ ಅರ್ಜಿ ಕುರಿತು ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.