BALLARI NEWS : ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಸ್ನಾನಕ್ಕೆಂದು ನದಿಗೆ ಇಳಿದ 16 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡ ಬಾಲಕನ ಹೆಸರು ವೇದಮೂರ್ತಿ. ಸ್ನಾನದ ವೇಳೆ ನದಿಯಲ್ಲಿ ಇದ್ದಾಗ, ದಿಢೀರ್ ಮೊಸಳೆ ದಾಳಿ ಮಾಡಿದ್ದು, ವೇದಮೂರ್ತಿ ಕೈ ಮತ್ತು ಎದೆ ಭಾಗವನ್ನು ಗಂಭೀರವಾಗಿ ಗಾಯಗೊಳಿಸಿದೆ. ಇನ್ನು ಘಟನೆ ನಡೆದ ವೇಳೆ, ಸ್ಥಳದಲ್ಲಿದ್ದ ವೀರೇಶ್ ಎಂಬ ಯುವಕ ಧೈರ್ಯ ತೋರಿಸಿ ಬಾಲಕನ ಪ್ರಾಣ ಉಳಿಸಿದ್ದಾರೆ. ಪಕ್ಕದಲ್ಲೇ ಸಿಕ್ಕ ಕಲ್ಲಿನಿಂದ ಮೊಸಳೆಯ ಮೇಲೆ ಎತ್ತಾಕಿ, ಆ ಬಾಲಕನನ್ನು ಮೊಸಳೆಯಿಂದ ರಕ್ಷಿಸಿದ್ದಾರೆ.
ಇನ್ನು ಗಾಯಾಳು ವೇದಮೂರ್ತಿಯನ್ನು ತಕ್ಷಣ ಕಂಪ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಬಾಲಕನ ಸ್ಥಿತಿ ಸ್ಥಿರವಾಗಿದ್ದು, ಪ್ರಾಣಾಪಾಯ ತಪ್ಪಿದೆ. ಇನ್ನು ಗ್ರಾಮದಲ್ಲಿ ಈ ಘಟನೆ ಭೀತಿಯ ವಾತಾವರಣ ನಿರ್ಮಿಸಿತ್ತು. ನೀರಿನ ಸಮೀಪದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.