CHIKKANAYAKANAHALLI : ಜಾತಿ, ಮತ, ಪಂಥ ಭೇದವಿಲ್ಲದೆ ಬಡತನದ ರೇಖೆಯಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ನಿರ್ಮಿಸಲು ಎಲ್ಲರೂ ಮುಂದಾಗಬೇಕು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಚಿಕ್ಕನಾಯಕಹಳ್ಳಿಯಲ್ಲಿ ಕರೆ ನೀಡಿದರು.
ಇಂದು ತಮ್ಮ ಸ್ವಗ್ರಾಮ ಜೆ.ಸಿ. ಪುರದಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪಿಯುಸಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ನೀಡಿದ ಪ್ರೋತ್ಸಾಹ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,"ಶಿಕ್ಷಣವು ವಿದ್ಯಾರ್ಥಿಗೆ ಸ್ವಾಭಿಮಾನದಿಂದ ಬದುಕುವ ಶಕ್ತಿ ನೀಡುತ್ತದೆ. ಪಿಯುಸಿ ವ್ಯಾಸಂಗ ಮುಂದುವರೆಸಲು ಅನೇಕ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಅಡಚಣೆ ಉಂಟಾಗುತ್ತದೆ. ಈ ಹಿನ್ನೆಲೆ ನಾನು ಮತ್ತು ಜೆ.ಪಿ. ಶಿವಕುಮಾರಸ್ವಾಮಿ ಅವರು ಬಡ ವಿದ್ಯಾರ್ಥಿಗಳ ನೆರವಿಗಾಗಿ ಯೋಜನೆ ರೂಪಿಸಿದ್ದೇವೆ" ಎಂದರು.
ಜೆ.ಸಿ.ಪುರದ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಪ್ರತಿವರ್ಷ ಐದು ಮಂದಿಗೆ 10,000 ಪ್ರೋತ್ಸಾಹ ಧನ ನೀಡಲು 6 ಲಕ್ಷ ಮೊತ್ತವನ್ನು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಖಾಯಂ ಠೇವಣಿಯಾಗಿ ಠೇವಣಿಯಾಗಿದ್ದು, ಅದರ ಬಡ್ಡಿ ಆದಾಯದಿಂದ ಪ್ರೋತ್ಸಾಹ ನಿಧಿ ವಿತರಣೆಯಾಗುತ್ತಿದೆ. ಇದಕ್ಕೆ ಸೇರಿ ಸಹಕಾರ ಸಂಘದಿಂದ ಕೂಡ 10,000 ನೀಡಲಾಗುತ್ತಿದೆ. ಒಟ್ಟು 50,000 ರಷ್ಟು ಮೊತ್ತ ವಿದ್ಯಾರ್ಥಿಗಳಿಗೆ ಹಂಚಲಾಗುತ್ತಿದೆ.
ಈ ಸಂದರ್ಭದಲ್ಲಿ ಜೆ.ಸಿ. ಪುರದಲ್ಲಿನ ಸರ್ಕಾರಿ ಪ್ರೌಢಶಾಲೆಯ ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.