ಚಿಕ್ಕನಾಯಕನಹಳ್ಳಿ - ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದ್ರು, ಊಟ ಸಿಗ್ತಿಲ್ಲ ತಿಂಡಿ,ಊಟ ಸಿಗದೇ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

indira canteen
indira canteen
ತುಮಕೂರು

ಪರಮೇಶ್ವರ್‌ ಸಾಹೇಬ್ರೆ ನೀವೇನೋ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿಗೆ ಹೋಗಿ ಇಂದಿರಾ ಕ್ಯಾಂಟೀನ್‌ ನನ್ನು ಉದ್ಘಾಟನೆ ಮಾಡಿದ್ರಿ. ಉದ್ಘಾಟನೆ ಮಾಡಿ ಭಾಷಣ ಬಿಗಿದು ಹೊರಟು ಹೋದ್ರಿ. ಆದ್ರೆ ಇದುವರೆಗೂ ಅಲ್ಲಿ ಇಂದಿರಾ ಕ್ಯಾಂಟೀನ್‌ ಓಪನ್‌ ಆಗಿಲ್ಲ. ಈ ಕಾರಣಕ್ಕೆ ಹುಳಿಯಾರು ನಗರದ ಬಡಜನರು ತಿಂಡಿ, ಊಟಕ್ಕಾಗಿ ಪರದಾಡುತ್ತಿದ್ದಾರೆ. ಬಡವರ ಹಸಿವ ನೀಗಿಸುವ ಹೆಸರೇಳಿ ನೀವು ಮಾಡಿರೋದು ಸರಿನಾ? ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಇತ್ತ ಶಾಸಕ ಸುರೇಶ್‌ ಬಾಬು ವಿರುದ್ಧವೂ ಕೂಡ ಜನರು ಆಕ್ರೋಶ ಹೊರಹಾಕ್ತಿದ್ದಾರೆ.

ಹೌದು,  ಚಿಕ್ಕನಾಯಕನಹಳ್ಳಿ ಕ್ಷೇತ್ರದ ಹುಳಿಯಾರು ಪಟ್ಟಣದ ಇಂದಿರಾ ಕ್ಯಾಂಟೀನ್‌ 25 ದಿನಗಳ ಹಿಂದೆ ಗೃಹ ಸಚಿವ ಜಿ.ಪರಮೇಶ್ವರ್ ಉದ್ಘಾಟನೆ ಮಾಡಿದ್ರು. ಉದ್ಘಾಟನೆ ಮಾಡಿದ್ದು ಅಷ್ಟೇ. ಆದ್ರೆ ಇಂದಿರಾ ಕ್ಯಾಂಟಿನ್‌ ಮಾತ್ರ ಇದುವರೆಗೂ ಸಾರ್ವಜನಿಕ ಸೇವೆಗೆ ಆರಂಭವಾಗಿಲ್ಲ. ಬಡವರ ಹಸಿವು ನೀಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಈ ಯೋಜನೆ ಇಂದು ನಾಮಫಲಕ್ಕಕ್ಕೆ ಸೀಮಿತವಾಗಿ, ತುಕ್ಕು ಹಿಡಿಯುತ್ತಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಇನ್ನು ಹುಳಿಯಾರು ಬಸ್ ನಿಲ್ದಾಣ, ಅಂಚೆ ಕಚೇರಿ ಹಾಗೂ ಆಟೋ ನಿಲ್ದಾಣದ ಹತ್ತಿರದಲ್ಲೇ ಇರುವ ಈ ಕ್ಯಾಂಟೀನ್‌ ಇದೆ.  ಪ್ರತಿದಿನವೂ ಹಳ್ಳಿಗಳಿಂದ ಬರುವ ಕೂಲಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಆಟೋ ಚಾಲಕರು ಈ ಕ್ಯಾಂಟಿನ್‌ ಕಡೆ ಮುಖಮಾಡಿ ನೋಡ್ತಾರೆ. ಆದ್ರೆ ಬರೀ ಖಾಲಿ ಕಟ್ಟಡ ಕಂಡು ವಾಪಾಸ್‌ ಹೋಗುತ್ತಿದ್ದಾರೆ. ಒಳಗಡೆ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲು ಒಂದಷ್ಟು ಸಲಕರಣೆಗಳನ್ನು ಇಟ್ಟಿದ್ದಾರೆ. ಆದ್ರೆ ಅದ್ಯಾಕೋ ಶಾಸಕರಿಗಾಗಲಿ, ಸಂಬಂಧಪಟ್ಟ ಅಧಿಕಾರಿಗಳಿಗಾಗಲಿ ಓಪನ್‌ ಮಾಡಿ ಸೇವೆ ಕೊಡಬೇಕು ಅನ್ನೋ ಮನಸ್ಸೆ ಬಂದಿಲ್ಲ. ಇಂದಿರಾ ಕ್ಯಾಂಟಿನ್‌ ಇದೆ, ಒಂದೊತ್ತಿನ ಊಟ ಸಿಗುತ್ತೆ ಅಂತ ಬರೋ ಜನರು ಮಾತ್ರ ಓಪನ್‌ ಆಗಿಲ್ಲದ್ದನ್ನು ಕಂಡು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಈ ಇಂದಿರಾ ಕ್ಯಾಂಟಿನ್‌ ಅನೈತಿಕ ಚಟುವಟಿಕೆಯ ತಾಣವಾಗ್ತಿದೆ ಅನ್ನೋ ಮಾತುಗಳು ಕೇಳಿಬರ್ತಿತ್ತು. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸ್ವಚ್ಛತಾ ಕಾರ್ಯವನ್ನು ಕೂಡ ಮಾಡಿದ್ರು. ಅದಾದ ಬಳಿಕ ಕಾಮಗಾರಿ ಪೂರ್ಣಗೊಂಡು ಸ್ವತಃ ಗೃಹ ಸಚಿವರೇ ಹೋಗಿ ಉದ್ಘಾಟನೆ ನೆರವೇಸಿದ್ರು. ಇದುವರೆವಿಗೂ ಇಂದಿರಾ ಕ್ಯಾಂಟೀನ್‌ ತೆರೆದಿಲ್ಲ, ಯಾವುದೇ ಸೇವೆ ಸಿಗದೆ ಜನರು ಪರದಾಡುತ್ತಿದ್ದಾರೆ. ಇತ್ತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಹೆಸರಿಗೆ ಮಾತ್ರ ಈ ಕ್ಯಾಂಟೀನ್ ಇದೆ, ಆದರೆ ಊಟ ಇಲ್ಲಾ. ಇಷ್ಟು ದಿನಗಳಾದರೂ ಇನ್ನೂ ಬಾಗಿಲು ತೆರೆದು ಹಸಿದವರಿಗೆ ಊಟ ಸಿಗದೆ ಇದ್ದರೆ, ಈ ಯೋಜನೆಯ ಉದ್ದೇಶವೇ ಏನು?" ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇಂದಿರಾ ಕ್ಯಾಂಟಿನ್‌ ಗೆ ಮುಕ್ತಿ ನೀಡಬೇಕಿದೆ. ಇಲ್ಲವಾದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ತಂದಿರುವ ವಸ್ತುಗಳು ತುಕ್ಕು ಹಿಡಿದು ಜನರ ಹಣ ಪೋಲಾಗೋದು ಗ್ಯಾರೆಂಟಿ.

Author:

...
Keerthana J

Copy Editor

prajashakthi tv

share
No Reviews