ಚಿಕ್ಕಮಗಳೂರು: ಚಾರ್ಮಾಡಿ ಘಾಟ್ನಲ್ಲಿ ಮಳೆಗಾಲದ ಆತಂಕವನ್ನೇ ಅರಿಯದೆ ನಿರ್ಲಕ್ಷ್ಯದಿಂದ ಪ್ರವಾಸಕ್ಕೆ ಬಂದಿದ್ದ ನಾಲ್ವರು ಯುವಕರ ವಿರುದ್ಧ ಬಾಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಯುವಕರು ಮಳೆಯ ನಡುವೆಯೂ ಜಲಪಾತದಲ್ಲಿ ದುಸ್ಸಾಹಸ ತೋರಿದ್ದು, ಸೆಲ್ಫಿ ಹಾಗೂ ರೀಲ್ಸ್ ಮಾಡಿದ್ದಾರೆ. ಅಲ್ಲದೇ ಮಳೆಯ ನಡುವೆಯೇ ಬಂಡೆಗಳ ಮೇಲತ್ತಿ ದುಸ್ಸಾಹಸ ತೋರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತೀವ್ರ ವಾತಾವರಣದ ನಡುವೆಯೂ, ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಪ್ರವಾಸಿಗರ ಅನಿಯಂತ್ರಿತ ನಡೆ ಮತ್ತೆ ಪತ್ತೆಯಾಗಿದ್ದು, ಇದೀಗ ಪೋಲೀಸರು ನೈಜವಾಗಿ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದುಸ್ಸಾಹಸದ ವಿಡಿಯೋಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಾಲ್ವರು ಯುವಕರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಬಾಣಕಲ್ ಪೊಲೀಸ್ ಠಾಣೆಯಿಂದ ಪ್ರಕರಣ ದಾಖಲಾಗಿದ್ದು, ಅಪಾಯಕಾರಿ ಸ್ಥಳದಲ್ಲಿ ಹುಚ್ಚಾಟ ಮೆರೆದಿದ್ದು, ಪ್ರವಾಸಿಗರು ತಮ್ಮ ಜೀವದ ಹಂಗು ತೊರೆದು ಆಕರ್ಷಕ ದೃಶ್ಯಕ್ಕಾಗಿ ಜೀವ ಕಳೆದುಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಮಳೆಯ ಸಮಯದಲ್ಲಿ ಜಲಪಾತದ ಪ್ರದೇಶಗಳು ಹೆಚ್ಚು ಅಪಾಯಕಾರಿಯಾಗಿರುತ್ತದೆ ಎಂಬ ಬಗ್ಗೆ ಪೊಲೀಸರು ಪುನಃ ಎಚ್ಚರಿಕೆ ನೀಡಿದ್ದಾರೆ.