BANGALORE : ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಿದ ಬೂಕರ್ ಪ್ರಶಸ್ತಿ ವಿಜೇತರಾದ ಲೇಖಕಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದರು. ಬಾನು ಮುಷ್ತಾಕ್ ಅವರ ಈ ಸಾಧನೆ ಇಡೀ ಕನ್ನಡ ನಾಡಿಗೆ ಹೆಮ್ಮೆ ಉಂಟುಮಾಡಿದ ಕ್ಷಣವಾಗಿದೆ. ಅವರ ಕತೆಗಳನ್ನು ಇಂಗ್ಲಿಷ್ಗೆ ಅನುವಾದಿಸಿ ಪ್ರಕಟಿಸಲು ಸರ್ಕಾರ ಹೆಚ್ಚುವರಿ ನೆರವು ನೀಡಲಿದೆ ಎಂದರು.
ಬಾನು ಮುಷ್ತಾಕ್ ಅವರು ಪತ್ರಕರ್ತೆಯಾಗಿ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿ, ವಕೀಲರಾಗಿ ಬಡವರ ಪರವಾಗಿ ನಿತ್ಯ ಹೋರಾಟ ನಡೆಸಿರುವುದು, ಸಾಹಿತ್ಯಕ್ಕೆ ಸಮಾಜಮುಖಿ ದೃಷ್ಟಿಕೋನ ನೀಡಿದ ಉದಾಹರಣೆಯಾಗಿದೆ. ಅವರ ಬರವಣಿಗೆಯಲ್ಲಿ ಮೌಡ್ಯ ವಿರೋಧ, ಲೈಂಗಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಪ್ರತಿಬಿಂಬವಿದೆ. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಧ್ವನಿಯಾಗಿ, ಬಾನು ಮುಷ್ತಾಕ್ ತಮ್ಮ ಬರವಣಿಗೆಯ ಮೂಲಕ ಸಮಾಜಕ್ಕೆ ದಿಕ್ಕು ತೋರಿಸುತ್ತಿದ್ದಾರೆ. ಅವರು ಪಡೆದಿರುವ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು, ಅವರ ಸಾಹಿತ್ಯದ ಭದ್ರತೆಯ ಸಾಕ್ಷ್ಯಗಳಾಗಿವೆ. ಬಾನು ಅವರ ಬರವಣಿಗೆಯನ್ನು ಅಕ್ಕಮಹಾದೇವಿ, ಪಂಪ, ಬಸವಣ್ಣ ಮತ್ತು ಕವಿರಾಜಮಾರ್ಗದ ಸಾಹಿತ್ಯ ಪರಂಪರೆಯ ಮುಂದುವರಿಕೆಯಾಗಿದ್ದು. “ಪರಧರ್ಮವನ್ನೂ ಸಹಾನುಭೂತಿಯಿಂದ ನೋಡಬೇಕು” ಎಂಬ ಸಂದೇಶವನ್ನು ಅವರು ತಮ್ಮ ಬರಹಗಳ ಮೂಲಕ ಜೀವಂತವಾಗಿಸಿದ್ದಾರೆ.
"ಇಂಥದ್ದೊಂದು ಮೇರು ಪ್ರಶಸ್ತಿಗೆ ಭಾಜನರಾದ ಬಾನು ಅವರನ್ನು ಸನ್ಮಾನಿಸುವುದು ಕನ್ನಡಿಗನಾಗಿ ನನಗೆ ಸಂತೋಷದ ವಿಷಯ. ಇಂತಹ ಇನ್ನಷ್ಟು ಪ್ರಭಾವಶಾಲಿ ಬರಹಗಳು ಅವರಿಂದ ಹೊರಬರಲಿ ಎಂದು ಹಾರೈಸುತ್ತೇನೆ" ಎಂದ ಸಿದ್ದರಾಮಯ್ಯ. ಇನ್ನು ಇದೇ ವೇಳೆ ಬಾನು ಮುಷ್ತಾಕ್, ದೀಪಾ ಭಾಸ್ತಿ ಅವರಿಗೆ ಸರ್ಕಾರದಿಂದ ತಲಾ 10 ಲಕ್ಷ ಪುರಸ್ಕಾರ ನೀಡಲಾಗುವುದು ಎಂದು ಘೋಷಿಸಿದರು.