BANGALORE : ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದಿಂದ ಉಂಟಾದ ಸಾವುನೋವಿನ ಆಘಾತದಲ್ಲಿರುವ ಈ ಸಮಯದಲ್ಲಿ, ನಟ ಯುವರಾಜ್ ಕುಮಾರ್ ತಮ್ಮ ಅಭಿನಯದ ‘ಎಕ್ಕ’ ಚಿತ್ರದ ಹೊಸ ಹಾಡು ಬಿಡುಗಡೆಯನ್ನು ಮುಂದೂಡಿದ್ದಾರೆ.
‘ಬ್ಯಾಂಗಲ್ ಸದ್ದಿಗೆ ಹೃದಯ ಘಲ್ ಅನ್ನೋ ಟೈಂ ಬಂತು’ ಎಂಬ ಮನಮುಟ್ಟುವ ಸಾಲಿನಿಂದ ಜನಮನ ಸೆಳೆದಿದ್ದ ಈ ಹಾಡು, ನಿಗದಿಯಂತೆ ಇಂದು ಸಂಜೆ 6:36ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ RCB ಅಭಿಮಾನಿಗಳ ಸಂಭ್ರಮಾಚರಣೆ ಸಂದರ್ಭ ನಡೆದ ಕಾಲ್ತುಳಿತ ದುರಂತದಲ್ಲಿ 11ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ, ಈ ಸಂಭ್ರಮವನ್ನು ಮುಂದೂಡಲಾಗಿದೆಯೆಂದು ಚಿತ್ರದ ತಂಡ ಘೋಷಿಸಿದೆ.
ಈ ಬಗ್ಗೆ ನಟ ಯುವರಾಜ್ ಕುಮಾರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವುಕ ಸಂದೇಶ ಹಂಚಿಕೊಂಡು ಹೀಗೆ ತಿಳಿಸಿದ್ದಾರೆ. "ಪ್ರತಿ ದುರಂತಗಳು ಸಂಭವಿಸುವ ಮೊದಲು ಸಮಯ ಸುಂದರವಾಗಿರುತ್ತೆ… ನಮ್ಮದೊಂದು ಸಣ್ಣ ಸಂಭ್ರಮವನ್ನು ಮುಂದೂಡುತ್ತಿದ್ದೇವೆ. ನೊಂದವರ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ."
ಈ ತೀರ್ಮಾನಕ್ಕೆ ಚಿತ್ರರಸಿಕರು ಮತ್ತು ಚಿತ್ರೋದ್ಯಮದ ಅನೇಕರ ಮೆಚ್ಚುಗೆ ವ್ಯಕ್ತವಾಗಿದೆ. ನೋವಿನ ಸಮಯದಲ್ಲಿ ಸಂತೋಷದ ಕ್ಷಣಗಳನ್ನು ಪಕ್ಕಕ್ಕೆ ನಿಲ್ಲಿಸುವ ಯುವರಾಜ್ ಕುಮಾರ್ ಅವರ ಈ ನಡೆ ಮಾನವೀಯತೆಗೆ ಮಾದರಿಯಾಗಿ ನಿಂತಿದೆ.