BANGALORE : ರಾಜ್ಯ ಸರ್ಕಾರ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇಕಡಾ 50ರಿಂದ 56ಕ್ಕೆ ಹೆಚ್ಚಿಸಿರುವ ಆದೇಶದ ಆಧಾರದ ಮೇಲೆ ಹೊರಡಿಸಿದ್ದ 384 ಕೆಎಎಸ್ (ಗೆಜೆಟೆಡ್ ಪ್ರೊಬೆಷನರ್) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ (ಕೆಎಟಿ) ರದ್ದುಪಡಿಸಿ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2024ರ ಫೆಬ್ರವರಿ 26ರಂದು ಈ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿತ್ತು. ಆದರೆ ಸರ್ಕಾರ 2022ರ ಡಿಸೆಂಬರ್ 12ರಂದು ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿ ಹೊರಡಿಸಿದ್ದ ಆದೇಶವು ಸಂವಿಧಾನಬದ್ಧ ಮಿತಿಗಳನ್ನು ಮೀರುತ್ತದೆ ಎಂದು ಹೇಳಿದ ಕೆಎಟಿ, ಈ ಆದೇಶವನ್ನೂ ಕೂಡ ರದ್ದುಗೊಳಿಸಿದೆ.
ಕೆಎಟಿ ತೀರ್ಪಿನಲ್ಲಿ, "ಪ್ರಸ್ತುತ ಅಧಿಸೂಚನೆಯು ಅಮಾನ್ಯವಾಗಿದೆ. ಆದರೆ ನೇಮಕಾತಿಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಹೊಸ ಅಧಿಸೂಚನೆ ಹೊರಡಿಸಲು ಕೆಪಿಎಸ್ಸಿ ಸ್ವತಂತ್ರವಾಗಿದೆ" ಎಂಬ ಸೂಚನೆ ನೀಡಿದೆ. ಈ ಮಧ್ಯೆ, ಈಗಾಗಲೇ ಮುಕ್ತಾಯವಾಗಿರುವ ಮುಖ್ಯ ಪರೀಕ್ಷೆ ನಂತರ ಫಲಿತಾಂಶ ಪ್ರಕಟವಾಗಬೇಕಾದ ಹಂತದಲ್ಲಿಯೇ ಈ ತೀರ್ಪು ಹೊರಬಿದ್ದಿರುವುದು, ಅಭ್ಯರ್ಥಿಗಳಲ್ಲಿ ಆತಂಕ ಉಂಟುಮಾಡಿದೆ.
ಸಾವಿರಾರು ಅಭ್ಯರ್ಥಿಗಳು ಬರೆದು ಮುಗಿಸಿರುವ ಪರೀಕ್ಷೆಯ ಫಲಿತಾಂಶ ಕುರಿತು ಈಗ ಕೆಎಟಿ ಆದೇಶ ಅಭ್ಯರ್ಥಿಗಳಿಗೆ ಸಂಕಷ್ಟ ತಂದೊಡ್ಡಿದ್ದು, ಕೆಎಟಿ ಆದೇಶದ ಬೆಳವಣಿಗೆಯಲ್ಲಿ ಸರ್ಕಾರ ಮುಂದಿನ ಹಂತದಲ್ಲಿ ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕಾದ ಅಗತ್ಯವಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಯ ಕಾನೂನುಬದ್ಧತೆ ಪುನಃ ಸ್ಥಾಪನೆಯಾಗುವ ಸಾಧ್ಯತೆ ಉಂಟುಮಾಡಬಹುದು.