DAKSHINA KANNADA : ಅಡಿಕೆ ವ್ಯಾಪಾರಿಯಿಂದ ನಂಬಿಕೆದ್ರೋಹ ಆರೋಪ | 94 ಲಕ್ಷ ರೂ.ಗೂ ಅಧಿಕ ವಂಚನೆ

BANTWALA NEWS : ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಬಡ್ಡಕಟ್ಟೆಯಲ್ಲಿ, ಸುಮಾರು ₹94 ಲಕ್ಷಕ್ಕೂ ಅಧಿಕ ಮೊತ್ತದ ಅಡಿಕೆ ವ್ಯಾಪಾರದ ವಂಚನೆ ಪ್ರಕರಣ ಉಲ್ಬಣಗೊಂಡಿದೆ. ಇನ್ನು ಸ್ಥಳೀಯ ವ್ಯಾಪಾರಿಗಳು ಗಾಬರಿಗೊಂಡಿದ್ದು, ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.

ನಾವೂರು ಗ್ರಾಮದ ಮೈಂದಾಲ ನಿವಾಸಿ ನೌಫಲ್ ಮಹಮ್ಮದ್, ಕಳೆದ 30 ವರ್ಷಗಳಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಅವರ ಮೇಲೆ ಇದೀಗ ಅಪರಾಧಿಕ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪ ಕೇಳಿಬಂದಿದೆ. ಈ ಕುರಿತು ಬಂಟ್ವಾಳ ನಿವಾಸಿ ಪ್ರವೀಣ್ ಡಿ ಸೋಜಾ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ FIR ದಾಖಲಿಸಲಾಗಿದೆ.

ಇನ್ನು ದೂರಿನ ಪ್ರಕಾರ, ಮಾರ್ಚ್ 8ರಂದು ಪ್ರವೀಣ್ ಅವರು ತಮ್ಮ 6.5 ಕ್ವಿಂಟಾಲ್ ಅಡಿಕೆಯನ್ನು ನೌಫಲ್ ಅಂಗಡಿಗೆ ತಂದು, ಅಂದಾಜು ₹3.5 ಲಕ್ಷದ ಮೌಲ್ಯದ ವ್ಯವಹಾರ ಮಾಡಿದ್ದಾರೆ. ಆದರೆ ನಗದು ಪಾವತಿ ಇನ್ನೂ ಆಗಿಲ್ಲ. ಜೂನ್ 9ರಂದು ರಾತ್ರಿ ನೌಫಲ್ ಅವರು ಪ್ರವೀಣ್ ಗೆ ಕರೆ ಮಾಡಿ, ನಷ್ಟದಲ್ಲಿದ್ದೇನೆ ಎಂದು ಹೇಳಿ, ಹಣವನ್ನು ಹಂತ ಹಂತವಾಗಿ ಕೊಡುತ್ತೇನೆ ಎಂದು ಮೆಸೇಜ್ ಕಳಿಸಿದ್ದಾರೆ. ಆದರೆ ಜೂನ್ 10ರ ಬೆಳಗ್ಗೆ ಪ್ರವೀಣ್ ಅವರು ಅಂಗಡಿಗೆ ಭೇಟಿ ನೀಡಿದಾಗ ಅಂಗಡಿ ಹಾಗೂ ಮನೆಗೆ ಬೀಗ ಹಾಕಲಾಗಿತ್ತು. ನೌಫಲ್ ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.

ಇದೇ ಸಂದರ್ಭದಲ್ಲಿ, ಇನ್ನೂ 24 ಮಂದಿ ವ್ಯಾಪಾರಸ್ಥರು ಕೂಡ ನೌಫಲ್ ವಿರುದ್ಧ ಹಣ ನೀಡದಿರುವ ಬಗ್ಗೆ ದೂರು ನೀಡಿದ್ದಾರೆ. ಒಟ್ಟು ₹94,77,810 ಮೊತ್ತದ ವಂಚನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದ್ದು, ನೌಫಲ್ ಮಹಮ್ಮದ್ ಪತ್ತೆಹಚ್ಚಲು ಕಾರ್ಯಾಚರಣೆ ಜೋರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾಳದ ವ್ಯಾಪಾರ ವಲಯದಲ್ಲಿ ನಂಬಿಕೆಯನ್ನು ದುರ್ಬಳಕೆ ಮಾಡಿದ್ದ ನೌಫಲ್ ಅವರ ಕರಾಳ ಕೃತ್ಯ ಬಹಿರಂಗವಾಗಿದ್ದು, ವ್ಯಾಪಾರಿಗಳಿಗೆ ಇದು ದೊಡ್ಡ ಪಾಠವಾಗಿದೆ. 

 

Author:

...
Keerthana J

Copy Editor

prajashakthi tv

share
No Reviews