ಹುಬ್ಬಳ್ಳಿ | ಮಂಡ್ಯ : ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಸೂಚನೆಗಳು ಸಿಕ್ಕಿವೆ. ಹೊಸ ಪ್ರಕರಣಗಳು ಒಂದೊಂದಾಗಿ ಪತ್ತೆಯಾಗುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಮನೆ ಮಾಡುತ್ತಿದೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪ ಗ್ರಾಮದ 11 ತಿಂಗಳ ಮಗುಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಗುವಿಗೆ ಮೂಲತಃ ಹೃದಯ ಸಂಬಂಧಿ ಕಾಯಿಲೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಸಮಯದಲ್ಲಿ ಪರೀಕ್ಷೆ ನಡೆಸಿದಾಗ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು, ಪ್ರಸ್ತುತ ಚಿಕಿತ್ಸೆ ಮುಂದುವರಿದಿದೆ. ಮಗು ಸ್ಥಿರ ಸ್ಥಿತಿಯಲ್ಲಿ ಇರುವುದಾಗಿ ಧಾರವಾಡ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಇನ್ನು ಮಂಡ್ಯದಲ್ಲಿ ಈ ವರ್ಷ ಮೊದಲ ಕೊರೊನಾ ಪ್ರಕರಣ 60 ವರ್ಷದ ವೃದ್ಧೆಯೊಬ್ಬರಲ್ಲಿ ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹರಕೆರೆ ಗ್ರಾಮದ ಕಲ್ಯಾಣಮ್ಮ ಎಂಬವರಲ್ಲಿ ಸೋಂಕು ದೃಢವಾಗಿದೆ. ಜ್ವರ, ಕೆಮ್ಮು, ನೆಗಡಿ ಜತೆಗೆ ಸಮಸ್ಯೆ ಕಾಣಿಸಿಕೊಂಡ ಕಾರಣ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವ್ ಬಂದಿದೆ. ಅವರನ್ನು ಕೂಡಲೇ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
*ಸೋಂಕಿನ ಲಕ್ಷಣಗಳು ಕಾಣಿಸಿದರೆ ತಕ್ಷಣ ಪರೀಕ್ಷೆಗೊಡಿಸಲು ವೈದ್ಯರು ಸಲಹೆ ನೀಡಿದ್ದಾರೆ. ವಯೋವೃದ್ಧರು, ಮಕ್ಕಳಿಗೆ ವಿಶೇಷವಾಗಿ ಆರೋಗ್ಯದ ಬಗ್ಗೆ ಜಾಗರೂಕತೆಯ ಅಗತ್ಯವಿದೆ.
ರಾಜ್ಯದಲ್ಲಿ ಮತ್ತೆ ಒಂದೊಂದಾಗಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸುವ ಅವಶ್ಯಕತೆ ಮತ್ತೆ ಒತ್ತಿ ಹೇಳಲಾಗಿದೆ. ಸಾರ್ವಜನಿಕರು ಹಳೆಯದಂತೆ ಜಾಗರೂಕತೆ ಮತ್ತು ಆರೋಗ್ಯ ನಿಯಮ ಪಾಲನೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.